ಕಡೂರು: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಲ್ಲೂರು ಗ್ರಾಮದ 20 ವರ್ಷದ ಚಂದನ್ ಮೃತಪಟ್ಟ ದುರ್ದೈವಿ.
ಇತ್ತೀಚೆಗೆ ಇದೇ ಗ್ರಾಮದ ಹುಡುಗಿಯೊಬ್ಬಳು ತನ್ನ ಪ್ರಿಯಕರನ ಜೊತೆ ಮನೆ ಬಿಟ್ಟು ಹೋಗಿದ್ದು, ಆಕೆಯ ಮೊಬೈಲ್ ಕರೆಗಳ ವಿವರವನ್ನು ಪರಿಶೀಲಿಸಿದಾಗ ಚಂದನ್ ನಂಬರ್ ಪತ್ತೆಯಾಗಿತ್ತು. ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ಮಾತುಕತೆ ನಡೆಸಿದ್ದ ಕಾರಣಕ್ಕಾಗಿ ಬೀರೂರು ಪೊಲೀಸರು ಚಂದನ್ನನ್ನು ಸಾಮಾನ್ಯ ವಿಚಾರಣೆಗೆಂದು ಠಾಣೆಗೆ ಕರೆಸಿದ್ದರು.
ವಿಚಾರಣೆ ಮುಗಿದ ಬಳಿಕ ಪೊಲೀಸರು ನಿನ್ನೆ ಸಂಜೆ ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ಮನೆಗೆ ಮರಳಿದ ಚಂದನ್ ಸಂಜೆ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಡುಗಿ ಓಡಿ ಹೋಗಲು ಈತನೇ ಕಾರಣ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಮಾತನಾಡಿಕೊಂಡಿದ್ದರಿಂದ ತೀವ್ರ ಮನನೊಂದು ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಚಂದನ್ ತನ್ನ ತಾಯಿಗೆ ಮೊಬೈಲ್ನಲ್ಲಿ ಸಂದೇಶವೊಂದನ್ನು ರವಾನಿಸಿದ್ದಾನೆ ಎನ್ನಲಾಗಿದೆ.
ಪ್ರಸ್ತುತ ಚಂದನ್ ಆತ್ಮಹತ್ಯೆಗೆ ಕೇವಲ ಪೊಲೀಸರ ವಿಚಾರಣೆ ಮಾತ್ರ ಕಾರಣವೇ ಅಥವಾ ಜನರ ಆಪಾದನೆ ಹಾಗೂ ಬೇರೇನಾದರೂ ಹಿನ್ನೆಲೆ ಇದೆಯೇ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಸಂಪೂರ್ಣ ತನಿಖೆಯಿಂದಷ್ಟೇ ಚಂದನ್ ಸಾವಿಗೆ ನಿಖರವಾದ ಕಾರಣ ಏನೆಂಬುದು ಹೊರಬರಬೇಕಿದೆ.
A young man who was being questioned by the police committed suicide.
Leave a comment