ಚಿಕ್ಕಮಗಳೂರು: ಕಾನೂನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲ್ಲಿಸಿ, ಲಾಂಗ್ ನಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಯುವಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಪ್ರಕರಣದ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಾಯ್ಕಾ ತಿಳಿಸಿದರು.
ಈ ಬಗ್ಗೆ ಹೇಳಿಕೆ ನೀಡಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಸಮೀರ್ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವೈರಲ್ ವಿಡಿಯೋದಲ್ಲಿ ಸುಮಾರು ಹತ್ತು ಜನ ಯುವಕರು ಕಾಣಿಸಿಕೊಂಡಿದ್ದು, ಇನ್ನುಳಿದ ಯುವಕರು ಅಲ್ಲಿಗೆ ಏಕೆ ಹೋಗಿದ್ದರು ಮತ್ತು ಈ ಪ್ರಕರಣದಲ್ಲಿ ಅವರ ಪಾತ್ರವೇನು ಎಂಬ ಬಗ್ಗೆ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕಾನೂನುಬಾಹಿರ ಆಯುಧಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಕಟ್ಟುನಿಟ್ಟಾಗಿ ಆರೋಪಿಗಳೆಂದೇ ಪರಿಗಣಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆರ್ಮ್ಸ್ ಆಕ್ಟ್ ಪ್ರಕರಣ: ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್ ಯುವ ಮುಖಂಡ ತೇಜಸ್ ಎಂಬಾತ ಬೈಕ್ ಅಡ್ಡಗಟ್ಟಿ, ಕಾರಿನಲ್ಲಿದ್ದ ಲಾಂಗ್ ಹೊರತೆಗೆದು ಸಾರ್ವಜನಿಕ ರಸ್ತೆಯಲ್ಲೇ ದಯಾನಂದ್ ಎಂಬುವವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ತೇಜಸ್ ವೈಯಕ್ತಿಕ ದ್ವೇಷ ಹಾಗೂ ವರ್ತನೆಯ ಹಿನ್ನೆಲೆಯಲ್ಲಿ ಜಗಳವಾಡಿ, ಮಾರಕಾಸ್ತ್ರ ಹಿಡಿದುಕೊಂಡು ಬೆದರಿಕೆ ಹಾಕಿದ್ದಾನೆ ಎಂದು ದೂರು ಬಂದಿರುವುದಾಗಿ ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ದೂರುದಾರರಿಂದ ಹೇಳಿಕೆ ಪಡೆದು ಈಗಾಗಲೇ ಆಲ್ಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದ್ದು, ಸದ್ಯದಲ್ಲೇ ಆತನನ್ನು ಬಂಧಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ.
ಘಟನೆಗೆ ನಿಖರವಾದ ಕಾರಣವೇನು ಎಂದು ಪ್ರಕರಣದ ಮುಂದಿನ ವಿಚಾರಣೆ ಹಾಗೂ ಆರೋಪಿಯ ಹೆಚ್ಚಿನ ಹೇಳಿಕೆಗಳ ಬಳಿಕವಷ್ಟೇ ಕೃತ್ಯದ ಹಿಂದಿರುವ ಸಂಪೂರ್ಣ ವಿಚಾರಗಳು ಹೊರಬರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
FIRs have been registered under the Arms Act in both cases.
Leave a comment