ತರೀಕೆರೆ: ತಮ್ಮದೇ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಅಕ್ರಮವಾಗಿ ಮುನ್ನುಗ್ಗಿ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ತರೀಕೆರೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಲಿಂಗದಹಳ್ಳಿಯ ಶಾಂತಿನಗರದ ನಿವಾಸಿಯಾದ ಸಿದ್ದಮ್ಮ ಎಂಬುವವರೇ ಈ ದೌರ್ಜನ್ಯಕ್ಕೆ ಒಳಗಾದ ದುರ್ದೈವಿ. ಸಿದ್ದಮ್ಮನವರು ಭೈರಾಪುರ ಗ್ರಾಮದ ಸರ್ವೇ ನಂಬರ್ 73 (ಹಳೆದು), 101 (ಹೊಸದು) ರಲ್ಲಿರುವ ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಿದ್ದಾಗ, ಅದೇ ಗ್ರಾಮದ ಸಣ್ಣಪ್ಪ ಹಾಗೂ ಆತನ ಮಗ ಮನು ಎಂಬುವವರು ಜಮೀನಿಗೆ ಅಕ್ರಮವಾಗಿ ನುಗ್ಗಿದ್ದಾರೆ.
ಈ ವೇಳೆ “ಉಳುಮೆ ಮಾಡಿದ ಜಾಗವನ್ನು ತುಳಿಯಬೇಡಿ” ಎಂದು ಸಿದ್ದಮ್ಮ ಹೇಳಿದ್ದೇ ತಡ, ಆಕ್ರೋಶದ ಕಟ್ಟೆ ಒಡೆದ ಸಣ್ಣಪ್ಪ ಸಿದ್ದಮ್ಮನವರ ವಿರುದ್ಧ ಅಸಭ್ಯವಾಗಿ ಜಾತಿ ನಿಂದನೆ ಮಾಡಿ ಕಾಲಿನಿಂದ ಒದೆಯಲು ಯತ್ನಿಸಿದ್ದಾನೆ.
ತಂದೆಯ ಜೊತೆಗೂಡಿದ ಮಗ ಮನು ಸಿದ್ದಮ್ಮನವರನ್ನು ಜೋರಾಗಿ ತಳ್ಳಿದ್ದು, ಅವರು ಕಲ್ಲಿನ ರಾಶಿಯ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸಿದ್ದಮ್ಮನವರ ಸೊಂಟ, ತೊಡೆ ಹಾಗೂ ಕಿವಿಯ ಭಾಗಕ್ಕೆ ಬಲವಾದ ಗಾಯಗಳಾಗಿವೆ. ಇಷ್ಟಕ್ಕೇ ನಿಲ್ಲದ ಆರೋಪಿ ತಂದೆ-ಮಗ, ಜಮೀನಿನಿಂದ ಖಾಲಿ ಮಾಡಿಸುವುದಾಗಿ ಅಬ್ಬರಿಸಿದ್ದಲ್ಲದೆ, ಮುಂದಿನ ದಿನಗಳಲ್ಲಿ ಒಬ್ಬಂಟಿಯಾಗಿ ಸಿಕ್ಕಾಗ ಬೈಕ್ನಲ್ಲಿ ಗುದ್ದಿಸಿ ಕೊಲೆ ಮಾಡುವುದಾಗಿ ಬಹಿರಂಗವಾಗಿಯೇ ಪ್ರಾಣ ಬೆದರಿಕೆ ಒಡ್ಡಿದ್ದಾರೆ.
ಸದ್ಯ ತೀವ್ರವಾಗಿ ಗಾಯಗೊಂಡಿರುವ ಸಿದ್ದಮ್ಮನವರು ತರೀಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸರು ಆರೋಪಿಗಳ ವಿರುದ್ಧ ಅಟ್ರಾಸಿಟಿ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
Caste abuse case registered in Bhairapura village
Leave a comment