ಚಿಕ್ಕಮಗಳೂರು: ಮದುವೆಗೆಂದು ರೂಮ್ ಬುಕ್ ಮಾಡಲು ಹೋದ ಯುವಕನಿಗೆ ಲಾಡ್ಜ್ ಮಾಲೀಕ ಜಾತಿ ನಿಂದನೆ ಮಾಡಿ, ಹಣೆಗೆ ಪಿಸ್ತೂಲ್ ಇಟ್ಟು ಕೊಲೆಗೆ ಯತ್ನಿಸಿರುವ ಘಟನೆ ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಂಡೆದಾಸರಹಳ್ಳಿಯ ಸಂದೀಪ್ ಎಂಬುವವರು ಇಂದಾವರ ಪ್ಯಾರಡೈಸ್ ಮಾಲೀಕ ಯತೀಶ್ ಎಂಬುವವರ ಬಳಿ ತನ್ನ ಸ್ನೇಹಿತನ ಮದುವೆಗಾಗಿ ರೂಮ್ ವಿಚಾರಿಸುವಾಗ ಏಕಾಏಕಿ ಅವಾಚ್ಯ ಪದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, “ರೂಮ್ ಬೇಕಾದರೆ 5 ಲಕ್ಷ ರೂಪಾಯಿ ಕೊಡು, ನಿಮ್ಮ ಜಾತಿಗೆ ಅಷ್ಟು ತಾಕತ್ ಇದೆಯಾ?” ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೆಖಿಸಾಲಾಗಿದೆ.
ಘಟನೆ ಇಷ್ಟಕ್ಕೇ ನಿಲ್ಲದೆ, ಭಾನುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಸಂದೀಪ್ ಅವರು ರಾಮನಹಳ್ಳಿಯ ಒಲಂಪಿಯಾ ಹೋಟೆಲ್ ಬಳಿ ಇದ್ದಾಗ ಮಾರುತಿ 800 ಕಾರಿನಲ್ಲಿ ಬಂದ ಯತೀಶ್, ಮತ್ತೆ ಜಗಳ ತೆಗೆದಿದ್ದಾನೆ. ಈ ವೇಳೆ ತನ್ನ ಬಳಿಯಿದ್ದ ಪಿಸ್ತೂಲ್ ತೆಗೆದು ಸಂದೀಪ್ ಅವರ ಹಣೆಗೆ ಗುರಿಯಿಟ್ಟು ಶೂಟ್ ಮಾಡಲು ಮುಂದಾಗಿದ್ದಾನೆ ಎಂದು ದೂರಲಾಗಿದೆ.
ತಕ್ಷಣ ಪಕ್ಕದಲ್ಲೇ ಇದ್ದ ಸಂದೀಪ್ ಸ್ನೇಹಿತ ಮಹೇಶ್ ಅವರು ಸಮಯಪ್ರಜ್ಞೆ ಮೆರೆದು ಸಂದೀಪ್ ಅವರನ್ನು ಪಕ್ಕಕ್ಕೆ ಎಳೆದು ದೂಡಿದ್ದರಿಂದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯ ತಪ್ಪಿದೆ. ಸದ್ಯ ಘಟನೆಯಿಂದ ಗಾಬರಿಗೊಂಡಿರುವ ಸಂದೀಪ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಯತೀಶ್ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ) ಹಾಗೂ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Attempted murder with pistol on a young man who went to book a room
Leave a comment