Home namma chikmagalur chikamagalur ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ
chikamagalurHomeLatest Newsnamma chikmagalur

ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ

Share
Share

ಚಿಕ್ಕಮಗಳೂರು: ಬಾಲ್ಯ ವಿವಾಹಕ್ಕೆ ನಿಷೇಧವಿದ್ದರೂ, ರಹಸ್ಯವಾಗಿ ಅಪ್ರಾಪ್ತರ ಮದುವೆ ನಡೆದರೆ ಪೋಕ್ಸೋ ಕಾಯಿದೆಯಡಿಯಲ್ಲೂ ಪ್ರಕರಣ ದಾಖಲಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ರೇಶ್ಮಾ ಸೂಚಿಸಿದ್ದಾರೆ.

ಅವರು ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ತಾಲೂಕು ಮಟ್ಟದ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ೨೧ ವರ್ಷದೊಳಗಿನ ಗಂಡು ಅಥವಾ ೧೮ ವರ್ಷದೊಳಗಿನ ಹೆಣ್ಣಿನ ಮದುವೆಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ ಅನ್ವಯವಾಗಲಿದ್ದು, ಅಂತಹ ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಬಾಲ್ಯ ವಿವಾಹ ನಡೆದರೆ, ಅಂತಹವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯಿದೆಯೊಂದಿಗೆ ಲೈಂಗಿಕ ದೌರ್ಜನ್ಯ ಪೋಕ್ಸೋ ಕಾಯಿದೆಯಡಿಲ್ಲಿಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೂಲಿ ಕಾರ್ಮಿಕರು ಮತ್ತು ವಲಸಿಗರು ನೆಲೆಸಿರುವ ಪ್ರದೇಶಗಳಲ್ಲಿ, ಲೈನ್‌ಗಳಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯಿದೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತೀ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಈ ಸಮಿತಿಗಳು ನಿರಂತರವಾಗಿ ಸಭೆ ನಡೆಸಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಗಮನಹರಿಸಬೇಕು ಎಂದು ತಹಶೀಲ್ದಾರ್ ತಿಳಿಸಿದರು.

ಚಿಕ್ಕಮಗಳೂರು ತಾ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್ ವರೆಗೆ ೫ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ೪ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಒಂದು ಬಾಲ್ಯ ವಿವಾಹ ನಡೆದಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲನೆಯ ಮಗುವಿಗೆ ರೂ. ೫೦೦೦ ಸಹಾಯಧನ ನೀಡಲಾಗುತ್ತಿದೆ. ಎರಡನೆಯ ಮಗುವು ಹೆಣ್ಣು ಮಗುವಾಗಿದ್ದಲ್ಲಿ ರೂ. ೬೦೦೦ ಸಹಾಯಧನ ನೀಡಲಾಗುತ್ತದೆ. ಚಿಕ್ಕಮಗಳೂರು ತಾಲೂಕಿನಲ್ಲಿ ೧೧೮೨ ಫಲಾನುಭವಿಗಳಿಗೆ ಈ ಯೋಜನೆಯಡಿ ನೋಂದಾಯಿಸಲಾಗಿದ್ದು, ಗುರಿ ಮೀರಿದ ಸಾಧನೆಯಾಗಿದೆ. ೨೦೨೫-೨೬ ನೇ ಸಾಲಿನಲ್ಲಿ ಒಟ್ಟು ರೂ. ೨೯.೬೧ ಲಕ್ಷ ಪಾವತಿಸಲಾಗಿದೆ ಎಂದು ಸಭೆಗೆ ಸಿಡಿಪಿಓ ಮಾಹಿತಿ ನೀಡಿದರು.

ಭಾಗ್ಯಲಕ್ಷ್ಮೀ ಯೋಜನೆಯಡಿ ೨೦೦೬-೦೮ರಲ್ಲಿ ನೋಂದಾಯಿಸಿದ ಫಲಾನುಭವಿಗಳಿಗೆ ಈಗಾಗಲೇ ಪರಿಪಕ್ವ ಮೊತ್ತವನ್ನು ಪಾವತಿಸಲಾಗಿದೆ. ಆದರೆ ಬಾಲ್ಯ ವಿವಾಹ, ಮರಣ ಸೇರಿದಂತೆ ವಿವಿಧ ಕಾರಣಗಳಿಂದ ೯೨ ಮಂದಿ ಇದರಲ್ಲಿ ಅನರ್ಹರಾಗಿದ್ದಾರೆ. ಪ್ರಸ್ತುತ ಭಾಗ್ಯಲಕ್ಷ್ಮೀ-ಸುಕನ್ಯ ಸಮೃದ್ಧಿ ಖಾತೆ ಯೋಜನೆಯಡಿ ಈ ನೆರವು ನೀಡಲಾಗುತ್ತಿದ್ದು, ಬಿಪಿಎಲ್ ಕುಟುಂಬದ ಅರ್ಹ ೨ ಹೆಣ್ಣುಮಕ್ಕಳಿಗೆ ೧೫ ವರ್ಷಗಳವರೆಗೆ ಒಟ್ಟು ರೂ. ೪೫ ಸಾವಿರ ಅಂಚೆ ಇಲಾಖೆಯಲ್ಲಿ ಠೇವಣಿ ಹೂಡಲಾಗುತ್ತಿದೆ. ತಾಲೂಕಿನಲ್ಲಿ ಇದುವರೆಗೆ ೧೭೮೮೦ ಮಂದಿಗೆ ಯೋಜನೆಯಡಿ ಬಾಂಡ್ ಬಂದಿದೆ ಎಂದು ಅವರು ಹೇಳಿದರು.

ಪೋಷನ್ ಅಭಿಯಾನದಡಿ ೬ ವರ್ಷದವರೆಗಿನ ಮಕ್ಕಳು, ಗರ್ಭಿಣಿಯರು-ಬಾಣಂತಿಯರು, ಕಿಶೋರಿಯರ ಆರೋಗ್ಯ ಮತ್ತು ಪೌಷ್ಠಿಕತೆಯ ಬಗ್ಗೆ ಗಮನಹರಿಸಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟದ ಪ್ರಕರಣಗಳು ತಾಲೂಕಿನಲ್ಲಿ ವರದಿಯಾಗಿಲ್ಲ ಎಂದು ಅವರು ತಿಳಿಸಿದರು. ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ತ್ವರಿತವಾಗಿ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ. ಅಗತ್ಯ ಬಿದ್ದರೆ ನೊಂದ ಮಹಿಳೆಗೆ ಪುನರ್ ವಸತಿ ಕಲ್ಪಿಸಲಾಗುವುದು ಎಂದು ಸಿಡಿಪಿಓ ರಂಗನಾಥ್ ತಿಳಿಸಿದರು.

ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ವಿವಿಧ ಇಲಾಖಾಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Instructions to file a POCSO case if child marriage occurs

 

Share

Leave a comment

Leave a Reply

Your email address will not be published. Required fields are marked *

Don't Miss

ಕಾಡು ಹಂದಿ ದಾಳಿಗೆ ಮಹಿಳೆ ಗಂಭೀರ ಗಾಯ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆಗಳ ಬೆನ್ನಲ್ಲೇ ಇದೀಗ ಕಾಡು ಹಂದಿಗಳ ಭೀತಿ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ತೋಟದಲ್ಲಿ...

ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ಸೋದರಿ- ಆಕೆಯ ಮಗಳ ಮೇಲೆ ಹಲ್ಲೆ

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ, ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ನಾಗರಾಜ್ ಎಂಬ ವ್ಯಕ್ತಿ ಕುಡಿದು ಬಂದು ತನ್ನ ಸೋದರಿ ಮತ್ತು ಆಕೆಯ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸ್ಥಳೀಯರು ಜಗಳ ಬಿಡಿಸಲು ಹೋದಾಗ...

Related Articles

ಜೀವರಾಜ್ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ...

ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ

ಚಿಕ್ಕಮಗಳೂರು: ನಗರದ ಜನರ ಹಿತದೃಷ್ಟಿಯಿಂದ ಏನು ಮಾಡುತ್ತೇವೆಯೋ, ಅದು ಶಾಶ್ವತವಾಗಿ ಇರುವಂತೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ...

ಅಕ್ರಮಗಳ ತನಿಖೆಗೆ ಒತ್ತಾಯ ಪೊಲೀಸ್ ದಬ್ಬಾಳಿಕೆ ವಿರುದ್ದ ಪ್ರತಿಭಟನೆ

ತರೀಕೆರೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಕೆಲವು ಸಂಘ ಸಂಸ್ಥೆಯವರು ಸ್ಥಳೀಯ ಶಾಸಕ ಶ್ರೀನಿವಾಸ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್...

ಉನ್ನತ ಅರಣ್ಯಾಧಿಕಾರಿಗಳ ಮೇಲೆ ವಾಮಾಚಾರ

ಎನ್.ಆ‌ರ್.ಪುರ: ಮೌಡ್ಯದ ಪರಾಕಾಷ್ಠೆ ಎಂಬಂತಹ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ....