ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಭಾರೀ ಗಾಳಿ ಹಾಗೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಅವಾಂತರಗಳು ಸಂಭವಿಸಿವೆ. ಅದೃಷ್ಟವಶಾತ್ ಕೆಲವು ದೊಡ್ಡ ಅನಾಹುತಗಳು ಕೂದಲೆಳೆ ಅಂತರದಲ್ಲಿ ತಪ್ಪಿವೆ.
ಎನ್.ಆರ್.ಪುರ ತಾಲೂಕಿನ ಆಮ್ತಿ ಬಳಿ ಬಾಳೆಹೊನ್ನೂರಿನಿಂದ ಕೊಟ್ಟಿಗೆಹಾರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬೃಹತ್ ಮರ ಧರೆಗುರುಳಿದ್ದು, ರಸ್ತೆಯ ಎರಡೂ ಬದಿಗಳಲ್ಲೂ ಕಿಲೋಮೀಟರ್ಗಳಷ್ಟು ಟ್ರಾಫಿಕ್ ಜಾಮ್ ಉಂಟಾಯಿತು. ಈ ವೇಳೆ ಕಾರಿನ ಮೇಲೆ ಬೀಳಬೇಕಿದ್ದ ಮರ ಜಸ್ಟ್ ಮಿಸ್ ಆಗಿದ್ದು, ಪ್ರವಾಸಿಗರ ಕಾರು ದೊಡ್ಡ ಅನಾಹುತದಿಂದ ಪಾರಾಗಿದೆ. ಸ್ಥಳೀಯರು ಮರ ತೆರವು ಕಾರ್ಯದಲ್ಲಿ ತೊಡಗಿಕೊಂಡರು.
ಇನ್ನೊಂದೆಡೆ, ಮಲೆನಾಡಿನ ಹಲವು ಭಾಗಗಳಲ್ಲಿ ಗಾಳಿ-ಮಳೆ ಅಬ್ಬರದಿಂದ ಜನರು ಬೆಚ್ಚಿಬಿದ್ದಿದ್ದಾರೆ. ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲು ಮಳೆ ಆಕಾಶದಿಂದ ಮಲ್ಲಿಗೆ ಹೂ ಸುರಿದಂತೆ ಕಾಣಿಸಿತು. ಕೆಲವೆಡೆ ಮಳೆ ನೀರು ರಸ್ತೆಗಳಲ್ಲಿ ಒಂದು ಅಡಿ ಎತ್ತರಕ್ಕೆ ಹರಿದಿದೆ.
ಭಾರೀ ಗಾಳಿಗೆ ಸಿಲ್ವರ್, ಅಡಿಕೆ ಹಾಗೂ ತೆಂಗಿನ ಮರಗಳು ಮುರಿದು ಬೀಳುವ ಸ್ಥಿತಿಗೆ ತಲುಪಿದ್ದು, ಕಳಸ ತಾಲೂಕಿನ ಕುದುರೆಮುಖ ಟಿಬಿ ಸರ್ಕಲ್ನಲ್ಲಿ ಮರ ಧರೆಗುರುಳಿದ ಘಟನೆ ವರದಿಯಾಗಿದೆ. ಕೆಲವು ಕಡೆಗಳಲ್ಲಿ ಮನೆಗಳ ಮೇಲ್ಛಾವಣಿ ಶೀಟ್ಗಳು ಭೂಮಿಯಿಂದ ನೂರು ಅಡಿ ಎತ್ತರಕ್ಕೆ ಹಾರಿ ಹೋಗಿರುವುದಾಗಿ ತಿಳಿದುಬಂದಿದೆ.
ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಭಾರೀ ಗಾಳಿಗೆ ಆರು ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಸಿಮೆಂಟ್ ಶೀಟ್ಗಳು ಹಾಗೂ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ ಅಲಗೇಶ್ವರ ಗ್ರಾಮದಲ್ಲಿ ಬೃಹತ್ ಮರ ಮನೆ ಮೇಲೆ ಬಿದ್ದರೂ, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸ್ಥಳಗಳಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ಮುಂದುವರಿಯುತ್ತಿರುವ ಗಾಳಿ-ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆಡಳಿತವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಗತ್ಯತೆ ಎದುರಾಗಿದೆ.
Heavy wind and rain in the Malnad region
Leave a comment