ಕಳಸ: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾದ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಭಾನುವಾರ ಪವಾಡ ಸದೃಶ ಘಟನೆಯೊಂದು ನಡೆದಿದೆ. ನಾಡಿನ ಸುವೃಷ್ಟಿಗಾಗಿ ಮತ್ತು ಸಮೃದ್ಧ ಮಳೆಗಾಗಿ ಕಳಸದ ಶ್ರೀ ಕಳಸೇಶ್ವರ ಸ್ವಾಮಿಗೆ ಭಕ್ತರು ಹಾಗೂ ಮಲೆನಾಡಿಗರು ವಿಶೇಷ ಪೂಜೆ ಹಮ್ಮಿಕೊಂಡಿದ್ದರು.
ಬೆಳಿಗ್ಗೆಯಿಂದಲೇ ಭಕ್ತಿಭಾವದಿಂದ ಶತಾರುದ್ರಾಭಿಷೇಕ, ಏಕಾದಶ ರುದ್ರಹೋಮ ಸೇರಿದಂತೆ ವರುಣ ದೇವನನ್ನು ಪ್ರಸನ್ನಗೊಳಿಸಲು ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು. ಆದರೆ, ಅಚ್ಚರಿಯೆಂಬಂತೆ ಈ ಪೂಜೆಗಳು ಸಂಪೂರ್ಣವಾಗಿ ಮುಗಿಯುವ ಮೊದಲೇ ಕಾಫಿನಾಡಿನ ಮಲೆನಾಡು ಭಾಗದಲ್ಲಿ ವರುಣದೇವ ಅಬ್ಬರಿಸಲು ಶುರುಮಾಡಿದ್ದಾನೆ.
ಕಳಸ, ಶೃಂಗೇರಿ, ಎನ್.ಆರ್. ಪುರ, ಮುತ್ತೋಡಿ, ಹೊರನಾಡು, ಕುದುರೆಮುಖ ಹಾಗೂ ಹಿರೇಬೈಲ್ ಭಾಗಗಳಲ್ಲಿ ಮಳೆ ಸುರಿದಿದ್ದು, ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಬೇಗೆಯಿಂದಾಗಿ ಕಾಫಿ ಮತ್ತು ಅಡಿಕೆ ತೋಟಗಳಿಗೆ ನೀರು ಹರಿಸಲು ಬೆಳೆಗಾರರು ಹರಸಾಹಸ ಪಡುತ್ತಿದ್ದರು. ಇದೀಗ ಸುರಿದ ಮಳೆಯಿಂದಾಗಿ ಮುಂದಿನ ಕನಿಷ್ಠ 15 ದಿನಗಳ ಕಾಲ ತೋಟಗಳಿಗೆ ನೀರು ಹರಿಸುವ ಅವಶ್ಯಕತೆ ಇಲ್ಲದಂತಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳಸೇಶ್ವರನಿಗೆ ‘ಉಪೇ’ ಎಂದು ಜಯಘೋಷ ಹಾಕುತ್ತಿರುವ ಮಲೆನಾಡಿಗರು, ದೇವರ ಪೂಜೆಗೆ ತಕ್ಷಣವೇ ಮಳೆರಾಯ ಸ್ಪಂದಿಸಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಳೆಯು ಕಾಫಿ ಬೆಳೆಗಾರರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದ್ದು, ಮಲೆನಾಡಿನ ಹಸಿರು ಮತ್ತೆ ಕಳೆಗಟ್ಟುವಂತೆ ಮಾಡಿದೆ.
Rain in various parts of the district including Kalasa
Leave a comment