ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್ ಬದಲಿಸಿ, ಬಳಿಕ ಅದನ್ನು ದುರುಪಯೋಗಪಡಿಸಿಕೊಂಡು ₹3.09 ಲಕ್ಷ ವಂಚಿಸಿರುವ ಪ್ರಕರಣ ವರದಿಯಾಗಿದೆ.
ಚಿಕ್ಕಪಟ್ಟಣಗೆರೆ ಗ್ರಾಮದ ಸುನಂದಾ ಅವರು, ತಮ್ಮ ಪತಿಯ ಹೆಸರಿನಲ್ಲಿದ್ದ ಭೂಮಿಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ₹5 ಲಕ್ಷವನ್ನು ಕಡೂರು ಕೆನರಾ ಬ್ಯಾಂಕ್ ಖಾತೆಗೆ ಜಮಾಮಾಡಿದ್ದರು.
ಜೂನ್ ತಿಂಗಳಲ್ಲಿ ಪುತ್ರ ರಾಕೇಶ್ ಅವರು, ಕೆನರಾ ಬ್ಯಾಂಕ್ ಎಟಿಎಂನಲ್ಲಿ ಮೂರು ಬಾರಿ ಹಣ ಹಿಂಪಡೆಯಲು ಯತ್ನಿಸಿದರೂ ಹಣ ಬರಲಿಲ್ಲ.
ಈ ವೇಳೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ನೆರವಾಗುವುದಾಗಿ ಹೇಳಿ ಎಟಿಎಂ ಕಾರ್ಡ್ ಪಡೆದು ಖಾತೆಯಲ್ಲಿನ ಬಾಕಿ ಮೊತ್ತ ಪರಿಶೀಲಿಸಿದ್ದಾನೆ. ಬಳಿಕ ‘ಹಣ ಬರುತ್ತಿಲ್ಲ’ ಎಂದು ಹೇಳಿ ಕಾರ್ಡ್ ಹಿಂತಿರುಗಿಸಿ ಸ್ಥಳದಿಂದ ತೆರಳಿದ್ದಾನೆ.
ಅದೇ ತಿಂಗಳಲ್ಲಿ ಸುನಂದಾ ಅವರು ಬ್ಯಾಂಕ್ನಿಂದ ₹2 ಲಕ್ಷ ನಗದು ಪಡೆದು ಸಂಬಂಧಿಕರೊಬ್ಬರಿಗೆ ಸಾಲ ತೀರಿಸಿದ್ದರು. ಬಳಿಕ, ಈ ತಿಂಗಳ 1ರಂದು ಮತ್ತೆ ಹಣ ಹಿಂಪಡೆಯಲು ಬ್ಯಾಂಕ್ಗೆ ತೆರಳಿದಾಗ ಖಾತೆಯಲ್ಲಿ ಹಣ ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
ಎಟಿಎಂ ಕಾರ್ಡ್ ಪರಿಶೀಲಿಸಿ ದಾಗ ಅದು ಸುನಂದಾ ಅವರದ್ದಲ್ಲ ಎಂಬುದು ಗೊತ್ತಾಗಿದೆ. ಪಾಸ್ಬುಕ್ ಪರಿಶೀಲಿಸಿದಾಗ ಖಾತೆಯಿಂದ ₹3.09 ಲಕ್ಷ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ.
ರಾಕೇಶ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸಿದ ವೇಳೆ ನೆರವಾಗುವ ನೆಪದಲ್ಲಿ ಬಂದಿದ್ದ ಅನಾಮಧೇಯ ವ್ಯಕ್ತಿ ಪಿನ್ ಸಂಖ್ಯೆ ಗಮನಿಸಿ, ಕಾರ್ಡ್ ಬದಲಿಸಿ ವಾಪಸ್ ನೀಡಿದ್ದಾನೆ. ಬಳಿಕ, ಮೂಲ ಕಾರ್ಡ್ ಬಳಸಿ ತಲಾ ₹10 ಸಾವಿರದಂತೆ 30 ಬಾರಿ ಹಾಗೂ ಒಮ್ಮೆ ₹9 ಸಾವಿರ ಸೇರಿ ಒಟ್ಟು ₹3.09 ಲಕ್ಷ ಹಣ ಹಿಂಪಡೆದು ವಂಚನೆ ಎಸಗಿದ್ದಾನೆ ಎಂದು ರಾಕೇಶ್ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
₹3.09 lakh fraud by changing ATM card
Leave a comment