ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
ದೊಡ್ಡ ಕುರುಬರಹಳ್ಳಿಯ ಬಸವತತ್ವ ಪೀಠದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಬಸವತತ್ವ ಪೀಠದ ನೇತೃತ್ವದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ನಾಟಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೂರದರ್ಶನ ಮನುಷ್ಯನನ್ನು ಇರುವುದಕ್ಕಿಂತ ಬಹಳ ಚಿಕ್ಕದಾಗಿ ತೋರಿಸುತ್ತದೆ. ಸಿನಿಮಾ ಬಹಳ ದೊಡ್ಡವನನ್ನಾಗಿ ತೋರಿಸುತ್ತದೆ. ಆದರೆ, ರಂಗಕರ್ಮಿಯಾಗಿ, ಮನುಷ್ಯನನ್ನು ಮನುಷ್ಯನನ್ನಾಗಿ ತೋರಿಸುವ ಒಂದು ಕಲೆ ನಾಟಕ ಮಾತ್ರ ಎಂದರು.
ಇವತ್ತು ಕೆಲ ಧಾರಾವಾಹಿಗಳು ಮನುಷ್ಯನ ವ್ಯಕ್ತಿತ್ವವನ್ನು ಬಹಳ ಸಣ್ಣತನದಲ್ಲಿ ತೋರ್ಪಡಿಸುವ ಕೆಲಸ ಮಾಡುತ್ತಿವೆ. ಮನುಷ್ಯನ ಉದಾತ್ತತೆಯನ್ನು ಮರೆಸಿ ಅವನ ಸಣ್ಣತನಗಳು ವಿಜೃಂಭಿಸುವಾಗೆ ಮಾಡುವ ಕೆಟ್ಟ ಕೆಲಸಗಳು ದೂರದರ್ಶನದ ಮೂಲಕ ಅಲ್ಲಲ್ಲಿ ನಡೆಯುತ್ತಿವೆ. ಕೆಟ್ಟ ಧಾರಾವಾಹಿಗಳನ್ನು ನೋಡುವ ಬದಲು ಒಂದು ಒಳ್ಳೆಯ ಪುಸ್ತಕ ಓದಿದರೆ ಮನೆತನಗಳು ಉದ್ಧಾರವಾಗುತ್ತವೆ ಎಂದು ಕಿವಿಮಾತು ಹೇಳಿದರು.
ದೂರದರ್ಶನ, ಸಿನಿಮಾಗಳು ಮನುಷ್ಯನಲ್ಲಿ ಇಲ್ಲದ ಭ್ರಮೆಗಳನ್ನು ನಿರ್ಮಿಸಿದ ಪರಿಣಾಮ ಯುವಕರನ್ನು ದಾರಿ ತಪ್ಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಂಗಕರ್ಮಿ ಭರವಸೆ ಹುಟ್ಟಿಸುವ ಕೆಲಸ ಮಾಡುತ್ತಿರುವುದು ಸಂತಸ ವಿಷಯ ಎಂದರು.
ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆದಿ ಮಾನವನ ಕಾಲದಿಂದಲೇ ನಾಟಕದ ಸ್ವರೂಪಗಳು ಹುಟ್ಟಿಕೊಂಡಿವೆ. ನಾಟಕ ಜಗತ್ತಿಗೆ ಒಳ್ಳೆಯ ಆಯಾಮಗಳನ್ನು ನೀಡಿದೆ. ನಾಟಕ ಅಥವಾ ಆಂಗಿಕ ಅಭಿನಯಗಳು ಜನರಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಮನ್ವಯಗಳನ್ನು ನೀಡುತ್ತಿದ್ದವು ಎಂಬುದು ಇತಿಹಾಸದಿಂದ ತಿಳಿಯುತ್ತದೆ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಯಲಾಟ ಮತ್ತು ನಾಟಕ ಸ್ವರೂಪಗಳು ಜನರಿಗೆ ಸ್ವಾತಂತ್ರ್ಯದ ಬಗೆಗಿನ ಕಾಳಜಿಯನ್ನು ಹುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದ ಅವರು, ಚಿಕ್ಕಮಗಳೂರಿನಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಿದ ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಜನರನ್ನು ಮುಟ್ಟಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ಮಾತನಾಡಿ, ಶತಮಾನದ ಹಿಂದೆಯೇ ಕಾಳಿದಾದ ವಿಶ್ವ ಪರಂಪರೆಯ ನಾಟಕ ರಂಗದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂದರು.
ರಂಗಕರ್ಮಿ ಒಬ್ಬ ವ್ಯಕ್ತಿಯನ್ನು ಸರ್ವೋತೋಮುಖ ಕಲಾವಿದನಾಗಿ ಸೃಷ್ಟಿಸುತ್ತದೆ. ರಂಗಕರ್ಮಿಯು ಕಲಾವಿದ ಗಾಯಕ, ನಟ, ಸಂಘಟಕ, ಸಂಗೀತಗಾರನಾಗಿರುತ್ತಾನೆ. ರಂಗಪೂಜೆ ಮಾಡಿದರೆ ಸರ್ವತೋಮುಖ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.
ಮತೀಯ ವ್ಯವಸ್ಥೆಯ ನಡುವೆ ಸಾಂಸ್ಕೃತಿಕತೆಯನ್ನು ಜತೆ ಜತೆಯಲ್ಲಿ ರೂಪಿಸಿದಾಗ ಮಾತ್ರ ಮನುಷ್ಯ ನಿಜವಾದ ಸುಸಂಸ್ಕೃತನಾಗುತ್ತಾನೆ. ಆ ನಿಟ್ಟಿನಲ್ಲಿ ಬಸವತತ್ವ ಪೀಠ ಪೂಜ್ಯರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಹಾಗೂ ಮೈಸೂರು ವಿಭಾಗವಾರು ನಾಟಕೋತ್ಸವದ ಸಂಚಾಲಕಿ ಮಮತಾ ಅರಸೀಕೆರೆ ಮಾತನಾಡಿ, ಕರ್ನಾಟಕ ನಾಟಕ ಅಕಾಡೆಮಿಯ ಮಹತ್ವಾಕಾಂಕ್ಷೆಯ sssಕಾರ್ಯಕ್ರಮವಿದು. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಅಕಾಡೆಮಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸುತ್ತಿದೆ.
ಈ ಸಂದರ್ಭದಲ್ಲಿ ಈ ವಿಭಾಗದ ೮ ಜಿಲ್ಲೆಗಳಲ್ಲಿ ಒಂದು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಆಯೋಜನೆ ಮಾಡುವ ಸಂದರ್ಭ ಬಂದಾಗ ಈ ಬಸವ ತತ್ವ ಪೀಠ ಸಹಕಾರಿಯಾಯಿತು. ರಂಗಭೂಮಿಯು ಮನುಷ್ಯರಲ್ಲಿ ಮಹತ್ವದ ಮಾರ್ಪಾಡನ್ನು ಮಾಡುತ್ತದೆ. ಈ ನೆಲ ಹೆಚ್ಚು ಹೆಚ್ಚು ರಂಗಭೂಮಿಯೆಡೆ ತೊಡಗಿಸಿಕೊಳ್ಳಬೇಕು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶಪ್ಪ, ಬಸವತತ್ವ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಮಹಡಿಮನೆ ಸತೀಶ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Culture, literature, and art can build a civilized community.
Leave a comment