ಚಿಕ್ಕಮಗಳೂರು: ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಬೀಳೂರಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಕನ್ನೇರಿ ಮಠದ ಶ್ರೀ ಅದೃಶ ಕಾಡಸಿದ್ದೇಶ್ವರ ಶ್ರೀಗಳು ಲಿಂಗಾಯತ ಮಠಾಧೀಶರ ಒಕ್ಕೂಟದ ಪೂಜ್ಯರ ಬಗ್ಗೆ ಅವಮಾನಕಾರಿ, ಮಾನಹಾನಿಕರ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಬಹುದಾದ ಶಬ್ದಗಳನ್ನು ಬಳಸಿರುವುದನ್ನು ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಮತ್ತು ಬಸವಪರ ಸಂಘನೆಗಳು ತೀವ್ರವಾಗಿ ಖಂಡಿಸಿವೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಗಂಗಾಧರಪ್ಪ ಅವರು ಅತ್ಯಂತ ಅವಮಾನಕರ ಶಬ್ದ ಬಳಸುವುದರೊಂದಿಗೆ ಪ್ರತಿಷ್ಠಿತ ಒಕ್ಕೂಟದ ಮಠಾಧೀಶರನ್ನು ಎದುರಿಸಿ ಹಿಂಸಾತ್ಮಕ ಹಲ್ಲೆ ಮಾಡುವ ಉದ್ದೇಶದಿಂದ ಕೀಳುಮಟ್ಟದ ಭಾಷೆ ಬಳಸಿದ್ದಾರೆಂದು ಆರೋಪಿಸಿದರು.
ಶ್ರೀಗಳ ಈ ಹೇಳಿಕೆಯಿಂದ ಲಿಂಗಾಯತ ಮಠಾಧೀಶರು ಮತ್ತು ಸಮಸ್ತ ವಿರಕ್ತ ಮಠಗಳ ಪೀಠಾಧಿಪತಿಗಳಿಗೆ ಅವಮಾನವಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.
ರಾಜ್ಯದಲ್ಲಿ ಲಕ್ಷಾಂತರ ಬಸವಣ್ಣನವರ ಅನುಯಾಯಿಗಳು ಲಿಂಗಾಯತ ಮಠಾಧೀಶರನ್ನು ಗುರುಗಳೆಂದು, ಬಸವಣ್ಣನವರನ್ನು ಲಿಂಗಾಯತ ಧರ್ಮದ ದರ್ಮಗುರು ಎಂದು ಆರಾಧಿಸುತ್ತಿದ್ದೇವೆ. ವಚನ ಸಾಹಿತ್ಯ ನಮ್ಮ ಗ್ರಂಥವಾಗಿದೆ. ಇಡೀ ಜಗತ್ತೇ ಅವರ ತತ್ವಗಳನ್ನು ನಂಬಿ ಆಚರಿಸುತ್ತಿದ್ದಾರೆ ಎಂದರು.
ಕನ್ನೇರಿ ಸ್ವಾಮಿಗಳು ಬಸವಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ ಮಠಾಧೀಶರನ್ನು ಕಲಾವಿದರೆಂದು ಬಸವಸಂಸ್ಕೃತಿ ಅಭಿಯಾನ ನಾಟಕದ ಕಂಪನಿ ಎಂದು ಟೀಕಿಸುವ ಮೂಲಕ ಅವಮಾನಿಸಿದ್ದಾರೆ. ಇದರಿಂದ ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೆ ದ್ವೇಷ ಹರಡಲು ಕಾರಣವಾಗಿದ್ದು, ಈ ಹೇಳಿಕೆಯನ್ನು ವಾಪಾಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಬಾಣೂರು ಚನ್ನಪ್ಪ, ತಾಲ್ಲೂಕು ಕಾರ್ಯದರ್ಶಿ ಎಂ.ಸಿ. ಚನ್ನೇಗೌಡ, ಜಾಗತಿಕ ಲಿಂಗಾಯತ ಮಹಾಸಭಾ ಕಡೂರು ತಾಲ್ಲೂಕು ಅಧ್ಯಕ್ಷ ಹೆಚ್.ಬಿ ಗಣೇಶ್, ತರೀಕೆರೆ ತಾಲ್ಲೂಕು ಅಧ್ಯಕ್ಷ ಜಿ. ಚಂದ್ರಶೇಖರ್, ಸಂಚಾಲಕ ವಿ.ಎನ್ ರಾಜಶೇಖರ್ ಉಪಸ್ಥಿತರಿದ್ದರು.
Protest against insult to Lingayat Sri by Kanneri Matha Sri
Leave a comment