ಚಿಕ್ಕಮಗಳೂರು ಜಿಲ್ಲೆಗೆ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ಗೆ ಪ್ರವೇಶ ನಿರ್ಬಂಧ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ತೆರಳದಂತೆ ಬ್ಯಾರಿಕೆಡ್ ಹಾಕಿದ್ದರಿಂದ ಎಸ್. ಪಿ .ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವರಾಜ್ ಶೆಟ್ಟಿ, ಶ್ರೀಕಾಂತ್ ಪೈ ಇತರೆ ಮುಖಂಡರು ನಿರ್ಬಂಧ ಹೇರಿದ ಜಿಲ್ಲಾಡಳಿತ ಕ್ರಮವನ್ನು ಟೀಕಿಸಿದರು.
ನಿರ್ಬಂಧ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ ಮಾತನಾಡಿ ಶರಣ್ ಪಂಪ್ ವೆಲ್ ನಗರದಲ್ಲಿ ಬೈಠಕ್ ನಡೆಸಲು ಆಗಮಿಸಬೇಕಿತ್ತು ಆದರೆ ಈ ನಿರ್ಧಾರದಿಂದ ಎಲ್ಲರಿಗೂ ನೋವುಂಟಾಗಿದೆ ಎಂದರು.
ಶರಣ್ ಹಿಂದೆಯೂ ಹಲವು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ್ದು ಎಂದೂ ಕೂಡ ಸಮಸ್ಯೆ ಆಗಿಲ್ಲವಾದರೂ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ ಎಂದರು.
ಸಂಜೆಯ ಒಳಗೆ ಈ ನಿರ್ಧಾರವನ್ನು ಹಿಂಪಡೆಯುವ ಭರವಸೆ ಜಿಲ್ಲಾಧಿಕಾರಿ ನೀಡಿದ್ದು, ಅದು ಈಡೇರದಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಇಂದೆ ಸಭೆ ನಡೆಸುವುದಾಗಿ ತಿಳಿಸಿದರು.
ಭಜರಂಗದಳ ಮುಖಂಡ ಮಹೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಪಂಪ್ ವೆಲ್ ಅವರಿಂದ ಆಗದಿದ್ದರೂ ಜಿಲ್ಲಾಡಳಿತದ ಈ ನಿರ್ಧಾರ ಖಂಡನೀಯ ಎಂದರು. ಪುಷ್ಪರಾಜ್, ಪ್ರದೀಪ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿದ್ದು,200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಡಿಸಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.
Protest against entry restrictions to Sharan Pump Well
Leave a comment