ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ ೨೫೦ ಬಿಎಸ್ಎನ್ಎಲ್ ಟವರ್ಗಳು ಇದ್ದವು. ಇದೀಗ ಕೇಂದ್ರ ಸರ್ಕಾರ ಮತ್ತೆ ೧೦೬ ಟವರ್ ಮಂಜೂರು ಮಾಡಿದೆ. ಇದಲ್ಲದೆ ಸೂಕ್ತ ಸೋಲಾರ್ ವ್ಯವಸ್ಥೆ ಹಾಗೂ ಬ್ಯಾಟರಿ ಕೂಡ ಕಲ್ಪಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಬಿಎಸ್ಎನ್ಎಲ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಸ್ತುತ ಮಂಜೂರು ಮಾಡಿರುವ ಹೊಸ ಟವರ್ಗಳು ಆರಂಭಗೊಂಡಿದ್ದೇ ಆದಲ್ಲಿ ಚಿಕ್ಕಮಗಳೂರು ಜಿಲ್ಲೆಯ ನೆಟ್ವರ್ಕ್ ಸಮಸ್ಯೆ ಶೇ. ೮೦ರಷ್ಟು ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೂ ಚರ್ಚೆ ನಡೆಸಿದ್ದೇನೆ. ಅವರು ಇನ್ನೂ ೧೫೦ ಹೊಸ ಟವರ್ ನಿರ್ಮಾಣಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಇನ್ನೆರಡು ವರ್ಷದಲ್ಲಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ನೆಟ್ವರ್ಕ್ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ೨ಜಿ ಟವರ್ಗಳು ಇದ್ದಾಗ ನಾಲ್ಕು ಕಿಲೋ ಮೀಟರ್ ವರೆಗೆ ನೆಟ್ವರ್ಕ್ ಸಿಗುತ್ತಿತ್ತು. ಆದರೆ ಇದೀಗ ಟವರ್ಗಳು ೪ಜಿಗೆ ಅಪ್ಗ್ರೇಡ್ ಆದ ಬಳಿಕ ನೆಟ್ವರ್ಕ್ ಎರಡು ಕಿಲೋಮೀಟರ್ಗೆ ಸೀಮಿತವಾಗಿದೆ. ಜೊತೆಗೆ ಇನ್ನು ಕೆಲ ಗ್ರಾಹಕರು ೨ಜಿಯಿಂದ ೪ಜಿಗೆ ಅಪ್ಗ್ರೇಡ್ ಆಗದ ಕಾರಣದಿಂದಾಗಿ ಅವರಿಗೂ ನೆಟ್ವರ್ಕ್ ಸಮಸ್ಯೆಯಾಗಿದೆ. ಹೊಸದಾಗಿ ಟವರ್ಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಮಾಹಿತಿ ನೀಡಿದರು.
ಟವರ್ ಅಳವಡಿಕೆಯಲ್ಲಿಯೂ ಕೆಲ ಲೋಪದೋಷಗಳಿವೆ. ಅದನ್ನು ನಾವು ಒಪ್ಪಿಕೊಂಡು ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಸಿಬ್ಬಂದಿಗಳ ಕೊರತೆಯಿದೆ. ಇದರಿಂದಾಗಿಯೂ ಕೆಲ ಸಮಸ್ಯೆಗಳಾಗುತ್ತಿವೆ. ಇದೆಲ್ಲವನ್ನೂ ಪರಿಹರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಹಿರೇಮಗಳೂರು ಪುಟ್ಟಸ್ವಾಮಿ ಸೇರಿದಂತೆ ಬಿಎಸ್ಎನ್ಎಲ್ ಡಿಜಿಎಂ ಹಾಗೂ ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
106 BSNL towers sanctioned for Chikkamagaluru district
Leave a comment