ಚಿಕ್ಕಮಗಳೂರು: ನಾಗಾಲ್ಯಾಂಡ್ ಮೂಲದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅರವಿಂದ ನಗರ ಬಡಾವಣೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 22 ವರ್ಷದ ಲುನ್ಸುಲಾ ಎಂದು ಗುರುತಿಸಲಾಗಿದ್ದು, ಈಕೆ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಉದ್ಯೋಗಿಯಾಗಿದ್ದರು.
ಪ್ರಾಥಮಿಕ ವರದಿಗಳ ಪ್ರಕಾರ, ಲುನ್ಸುಲಾ ಅವರು ತಮ್ಮ ವಾಸದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವಿನ ಹಿಂದೆ ರಾಜೇಶ್ ಹಾಗೂ ತೇಜಸ್ ಎಂಬುವವರ ಕೈವಾಡವಿರಬಹುದು ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.
ಮೃತ ಯುವತಿಯು ತನ್ನ ಪರ್ಸನಲ್ ಡೈರಿಯಲ್ಲಿ ಈ ಇಬ್ಬರ ಹೆಸರನ್ನು ಉಲ್ಲೇಖಿಸಿದ್ದು, ಇವರು ತನಗೆ ತೀವ್ರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಬರೆದಿಟ್ಟಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಘಟನೆ ಸಂಭವಿಸುವುದಕ್ಕೂ ಮೊದಲು ಲುನ್ಸುಲಾ ಅವರು ಕಿವಿಶೆ ಕಿನಿಮಿ ಎಂಬುವವರ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಲಶಿಲಾ ಇಂಚುಗರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಡೈರಿಯಲ್ಲಿನ ಅಂಶಗಳು ಹಾಗೂ ಮೃತರ ಮೊಬೈಲ್ ಕರೆಗಳ ವಿವರಗಳನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಯುವತಿಯ ಆತ್ಮಹತ್ಯೆಗೆ ನಿಖರವಾದ ಕಾರಣವೇನು ಮತ್ತು ಆ ಇಬ್ಬರು ವ್ಯಕ್ತಿಗಳು ನೀಡುತ್ತಿದ್ದ ಎನ್ನಲಾದ ಹಿಂಸೆಯ ಸ್ವರೂಪ ಎಂತದ್ದು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
Young woman from Nagaland commits suicide
Leave a comment