ಚಿಕ್ಕಮಗಳೂರು: ಜಿಲ್ಲಾಧಿಕಾರಿಯಾಗಿದ್ದ ಎನ್.ಎಂ. ನಾಗರಾಜ್ ಅವರ ದಿಢೀರ್ ವರ್ಗಾವಣೆ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಒಳಗೊಂಡ ಜಿಲ್ಲೆಯ ಆಡಳಿತ ಹಳಿ ಹತ್ತುವಷ್ಟರಲ್ಲೇ, ಅಧಿಕಾರ ವಹಿಸಿಕೊಂಡ ಕೇವಲ ನಾಲ್ಕು ತಿಂಗಳಿಗೆ ಅವರನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಿರುವುದು ಹಲವು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಈ ಹಠಾತ್ ವರ್ಗಾವಣೆಯ ಹಿಂದೆ ಇತ್ತೀಚೆಗೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ ಉಂಟಾದ ಗೊಂದಲವೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಶೃಂಗೇರಿಯ ಅಂಚೆ ಮತಗಳ ಎಣಿಕೆಗೂ ಮುನ್ನ ಬ್ಯಾಲೆಟ್ ಬಾಕ್ಸ್ ಓಪನ್ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಮತ ಮರು ಎಣಿಕೆಯ ದಿನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶೃಂಗೇರಿ ಶಾಸಕ ರಾಜೇಗೌಡ ತಕ್ಷಣವೇ ಮತ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದರೂ ಅಲ್ಲದೆ, ಈ ಇಡೀ ಗೊಂದಲದ ಪ್ರಕರಣವನ್ನು ಹೈಕೋರ್ಟ್ ಗಮನಕ್ಕೆ ತಂದು, ನ್ಯಾಯಾಲಯದ ಕಾನೂನಾತ್ಮಕ ನಿರ್ದೇಶನ ಪಡೆದ ಬಳಿಕವಷ್ಟೇ ಮುಂದಿನ ಮತ ಎಣಿಕೆ ನಡೆಸಬೇಕು ಎಂದು ಪಟ್ಟು ಹಿಡಿದ್ದರು. ಸೂಕ್ಷ್ಮತೆಯಿಂದ ಕೂಡಿದ್ದ ಈ ಮರು ಎಣಿಕೆ ಪ್ರಕ್ರಿಯೆಯಲ್ಲಿ 12 ಅಂಚೆ ಮತಗಳು ನಾಪತ್ತೆಯಾಗಿದ್ದು ಅನುಮಾನ ಮೂಡಿಸಿತ್ತು.
ಒಟ್ಟಾರೆ ಇಡೀ ಪ್ರಕ್ರಿಯೆ ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲವಾಯಿತೇ ಮತ್ತು ಇದೇ ಕಾರಣಕ್ಕೆ ಡಿಸಿ ನಾಗರಾಜ್ ಅವರು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ವರ್ಗಾವಣೆಯಾಗಿದ್ದಾರೆಯೇ ಎಂಬ ಪ್ರಶ್ನೆ ಈಗ ಕಾಫಿನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಭನ್ವರ್ ಸಿಂಗ್ ಮೀನ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಈ ಬೆಳವಣಿಗೆಗಳ ಮಧ್ಯೆ ನೂತನ ಡಿಸಿ ಜಿಲ್ಲೆಯನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ.
Sringeri postal votes counted – District Magistrate transferred suddenly
Leave a comment