ಕಡೂರು: ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು ಕಳೆದ ಶುಕ್ರವಾರ ಬಂಧಿಸಲಾಗಿದೆ. ಅವರ ಬಂಧನದ ಬೆನ್ನಲ್ಲೇ ಕಡೂರು ಪೊಲೀಸ್ ಠಾಣೆಯ ಸುತ್ತ ಇದೀಗ ವಿವಾದಾತ್ಮಕ ನೀಲಣ್ಣವರ್ ಪ್ರಕರಣದ ಸುಳಿ ಸುತ್ತಿಕೊಳ್ಳಲಾರಂಭಿಸಿದೆ.
ಮಾರ್ಚ್ 15 ರಂದು ಕಡೂರಿನಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎಪಿಎಂಸಿ ಆವರಣದಲ್ಲಿ ಯಾವುದೇ ಪೂರ್ವ ಅನುಮತಿಯಿಲ್ಲದೆ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಾನಂದ ನೀಲಣ್ಣವರ್, “ಕಡೂರಿನಲ್ಲಿ ಗಂಡಸರಿಲ್ವಾ, ನಾಳೆ ಮನಸ್ಸು ಮಾಡಿದರೆ ಮುಖ್ಯಮಂತ್ರಿ ಆಗುತ್ತೇನೆ, ನನ್ನ ಗಂಡಸ್ತನವನ್ನು ತೋರಿಸುತ್ತೇನೆ” ಎನ್ನುವ ಅತ್ಯಂತ ಪ್ರಚೋದನಾತ್ಮಕ ಮತ್ತು ದ್ವೇಷಪೂರಿತ ಭಾಷಣವನ್ನು ಮಾಡಿದ್ದರು.
ಇಂತಹ ಗಂಭೀರ ಹೇಟ್ ಸ್ಪೀಚ್ ಮಾಡಿದ್ದ ಶಿವಾನಂದ ವಿರುದ್ದ ತಕ್ಷಣವೇ ಎಫ್ಐಆರ್ ದಾಖಲಿಸಬೇಕಿದ್ದ ಕಡೂರು ಪೊಲೀಸರು, ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಪೊಲೀಸರು ಎಫ್ಐಆರ್ ದಾಖಲಿಸಬೇಕಿದ್ದ ವ್ಯಕ್ತಿಯಿಂದಲೇ ದೇಣಿಗೆ ಪಡೆದಿದ್ದರು ಎನ್ನುವ ಗಂಭೀರ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಅನುಮಾನಗಳಿಗೆ ಪುಷ್ಟಿ ನೀಡುವಂತೆ, ಸ್ವತಃ ಕಡೂರು ಪೊಲೀಸ್ ಠಾಣೆಯ ನಾಮಫಲಕದಲ್ಲಿ “ಶಿವಾನಂದ ನೀಲಣ್ಣವರ್ ಕೊಡುಗೆ” ಎಂದು ದೊಡ್ಡದಾಗಿ ಬರೆಯಲಾಗಿತ್ತು ಆದರೆ ನೀಲಣ್ಣವರ್ ಅರೆಸ್ಟ್ ಆಗುತ್ತಿದ್ದಂತೆ, ಕಡೂರು ಪೊಲೀಸ್ ಠಾಣೆಯ ನಾಮಫಲಕದಲ್ಲಿದ್ದ ಆತನ ಹೆಸರು ರಾತ್ರೋರಾತ್ರಿ ನಿಗೂಢವಾಗಿ ಮಾಯವಾಗಿದೆ.
ಮೊದಲು ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಯಿಂದ ದೇಣಿಗೆ ಪಡೆದು ಠಾಣೆಯ ನಾಮಫಲಕದಲ್ಲೇ ಆತನ ಹೆಸರನ್ನು ಹಾಕಿಕೊಂಡಿದ್ದು, ಆತ ಬಂಧನಕ್ಕೊಳಗಾಗುತ್ತಿದ್ದಂತೆ ಸಾಕ್ಷ್ಯ ನಾಶ ಮಾಡುವಂತೆ ಹೆಸರನ್ನು ಅಳಿಸಿ ಹಾಕಿರುವುದು ಕಡೂರು ಪೊಲೀಸರ ನಡೆ ಮತ್ತು ಕರ್ತವ್ಯ ನಿಷ್ಠೆಯ ಮೇಲೆ ಸಾರ್ವಜನಿಕರಲ್ಲಿ ಅನುಮಾನ ಹಾಗೂ ಅಸಮಾಧಾನ ಮೂಡುವಂತೆ ಮಾಡಿದೆ.
Removal of the nameplate “Shivananda Neelannavar’s contribution”
Leave a comment