ಚಿಕ್ಕಮಗಳೂರು: ನಗರ ಹೊರವಲಯದ ಗವನಹಳ್ಳಿ ಬಳಿ ನಿರ್ಮಿಸುತ್ತಿರುವ ಸಿಎನ್ಜಿ ಗ್ಯಾಸ್ ಸ್ಟೇಷನ್ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಗ್ಯಾಸ್ ಸ್ಟೇಷನ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಹಲವಾರು ಬಿಜೆಪಿ ಮುಖಂಡರು, ಸ್ಥಳೀಯ ನಿವಾಸಿಗಳು ಗ್ಯಾಸ್ಬಂಕ್ ಬೇಡ ಎಂಬ ಫ್ಲೆಕ್ಸ್ ಪ್ರದರ್ಶಿಸಿದರು. ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು.
ಸ್ಥಳೀಯ ನಿವಾಸಿ ಕೇಶವ್ ಈ ವೇಳೆ ಮಾತನಾಡಿ, ಗ್ಯಾಸ್ ಸ್ಟೇಷನ್ ನಿರ್ಮಿಸುತ್ತಿರುವ ಪಕ್ಕದಲ್ಲಿ ನನ್ನ ಮನೆ, ಸುತ್ತಮುತ್ತ ಸಾರ್ವಜನಿಕರ ಮನೆಗಳಿವೆ. ಹಿಂಭಾಗದಲ್ಲಿ ಎಸ್ಸಿ ಸ್ಮಶಾನವಿದೆ. ಪಕ್ಕದಲ್ಲಿ ಸಾಮಿಲ್ ಇದ್ದು ಒಣಕಟ್ಟಿಗೆಗಳ ರಾಶಿಯೇ ಇದೆ. ಬೆಂಕಿ ಅವಘಡ ಉಂಟಾದಲ್ಲಿ ಇಡೀ ಊರೇ ಭಸ್ಮವಾಗುವ ಅಪಾಯವಿದೆ ಎಂದು ದೂರಿದರು.
ಸಿಎನ್ಜಿ ಕಂಪನಿಯವರು ಗ್ಯಾಸ್ ಬಂಕ್ ನಿರ್ಮಿಸುವುದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿಸಲ್ಲಿಸಿದ್ದೆ, ಅವರು ಒಂದು ವರ್ಷ ಕಳೆದರೂ ನಮಗೆ ಸಮಜಾಯಿಷಿ ನೀಡಲಿಲ್ಲ. ಇದೀಗ ಮಾಲೀಕರಿಗೆ ಗ್ಯಾಸ್ ಬಂಕ್ ನಿರ್ಮಿಸಲು ಅನುಮತಿ ನೀಡಿದ್ದಾರೆ, ಇದು ಕಾನೂನುಬಾಹಿರ ಎಂದು ಆರೋಪಿಸಿದರು.
ಪಕ್ಕದಲ್ಲಿ ಯೋಗ ತರಗತಿ ಕೊಠಡಿ, ಸ್ಮಶಾನ, ಸಾಮಿಲ್ ಸಾರ್ವಜನಿಕ ಹಿತದೃಷ್ಟಿ ಹಿನ್ನೆಲೆಯಲ್ಲಿ ಗ್ಯಾಸ್ ಸ್ಟೇಷನ್ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಕುರುವಂಗಿ ವೆಂಕಟೇಶ್ ಮಾತನಾಡಿ, ಗ್ಯಾಸ್ ಸ್ಟೇಷನ್ ನಿರ್ಮಿಸುತ್ತಿರುವ ಹಿಂಭಾಗದಲ್ಲಿ ಪರಿಶಿಷ್ಟ ಸಮುದಾಯದ ಸ್ಮಶಾನವಿದೆ. ಅಲ್ಲಿ ಕಳೆಬರ ದಹಿಸುವಾಗ ಬೆಂಕಿ ಅವಘಡ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗಿರುವ ಗ್ಯಾಸ್ ಸ್ಟೇಷನ್ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್, ಕವಿತಾಶೇಖರ್, ಮುತ್ತಯ್ಯ, ಸಂತೋಷ್ ಕೊಟ್ಯಾನ್, ಆಲ್ದೂರು ಶಶಿ, ಅಮೃತೇಶ ಚನ್ನಕೇಶವ. ಶ್ಯಾಮ್ ವಿ ಗೌಡ, ರೂಪಕುಮಾರ್, ರವಿಕುಮಾರ್ ಮತ್ತಿತರಿದ್ದರು.
Protest against permission for CN gas station
Leave a comment