ಚಿಕ್ಕಮಗಳೂರು: ಕಾಫಿನಾಡಿನ ಸಮಗ್ರ ಅಭಿವೃದ್ಧಿ ನೀಲನಕ್ಷೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ನೂತನ ಜಿಲ್ಲಾಡಳಿತ ಸಂಕೀರ್ಣದ (ಡಿಸಿ ಕಾಂಪ್ಲೆಕ್ಸ್) ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, 2027ರ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.
ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಈ ಹಿಂದೆ ತಾಜ್ ಹೋಟೆಲ್ ಬಳಿ ಜಾಗದ ವಿವಾದ ಹಾಗೂ ಸಾರ್ವಜನಿಕರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ತೋಟಗಾರಿಕಾ ಇಲಾಖೆಯ ಸುಸಜ್ಜಿತ ಜಾಗವನ್ನು ಗುರುತಿಸಿ 60 ಕೋಟಿ ರೂಪಾಯಿಗಳ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಪ್ರಸ್ತುತ 56 ಕೋಟಿ ರೂಪಾಯಿ ವೆಚ್ಚದಲ್ಲಿ ಆಡಿಟೋರಿಯಂ, ಕಾಂಪ್ಲೆಕ್ಸ್ ಹಾಗೂ ಲ್ಯಾಂಡ್ ಪಿಂಗ್ ಒಳಗೊಂಡಂತೆ ನಿರ್ಮಾಣವಾಗುತ್ತಿರುವ ಈ ಸಂಕೀರ್ಣದಲ್ಲಿ ಜಿಲ್ಲಾ ಮಟ್ಟದ ಏಳು ಪ್ರಮುಖ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ.
ಹೊಸ ಸಂಕೀರ್ಣದ ಜೊತೆಗೆ ಸಾರ್ವಜನಿಕರಿಗೆ ಅಗತ್ಯವಿರುವ ಕ್ಯಾಂಟೀನ್, ಹೊರಭಾಗದಲ್ಲಿ ಸುಸಜ್ಜಿತ ಶೌಚಾಲಯ, ಜೆರಾಕ್ಸ್ ಮತ್ತು ಪ್ರಿಂಟಿಂಗ್ ಸೇವಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಹಾಗೂ ಹೋರಾಟಗಳನ್ನು ನಡೆಸಲು ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಪ್ರತ್ಯೇಕ ವೇದಿಕೆ ಅಥವಾ ಸ್ಥಳಾವಕಾಶ ಕಲ್ಪಿಸುವುದು ಅತ್ಯಗತ್ಯವಾಗಿದೆ.
ಇದರೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಎಐಟಿ ವೃತ್ತದವರೆಗೆ ನಿರ್ಮಿಸಲಾಗಿರುವ ಸರ್ವಿಸ್ ರಸ್ತೆಯನ್ನು ಹನುಮಂತಪ್ಪ ವೃತ್ತ ಅಥವಾ ಕತ್ರಿಮಾರಮ್ಮ ದೇವಸ್ಥಾನದವರೆಗೆ ವಿಸ್ತರಿಸಿದರೆ ಶಾಲೆ, ಎಪಿಎಂಸಿ ಮತ್ತು ಡಿಸಿ ಕಾಂಪ್ಲೆಕ್ಸ್ಗೆ ಬರುವ ಜನರಿಗೆ ಸಂಚಾರ ದಟ್ಟಣೆ ಹಾಗೂ ಅಪಘಾತ ಮುಕ್ತ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಿ.ಟಿ. ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
New district administration complex to be inaugurated by March-April
Leave a comment