ಚಿಕ್ಕಮಗಳೂರು: ಕೋವಿಡ್ ಮಹಾಮಾರಿ ಪುನಃ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ಗೆ ಗ್ರಾಹಕರು, ಸಾರ್ವಜನಿಕರು ಬಂದಾಗ ಸ್ವಚ್ಚತೆ ಮತ್ತು ಅಂತರ ಕಾಪಾಡುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.
ಅವರು ಇಂದು ನಗರಸಭೆ ಆವರಣದಲ್ಲಿ ಕರೆಯಲಾಗಿದ್ದ ಹೋಟೆಲ್ ಮಾಲೀಕರು, ಲಾಡ್ಜ್ ಹಾಗೂ ತಿಂಡಿ ಗಾಡಿಗಳ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಹೋಟೆಲ್ನಲ್ಲಿ ನೀರು ಸಂಗ್ರಹಗಾರಗಳ ಮುಚ್ಚಳ ಮುಚ್ಚಿರಬೇಕು, ದಿನಕ್ಕೆ ಎರಡು ಬಾರಿ ಫಿನಾಯಲ್ ಹಾಕಿ ಹೋಟೆಲ್ ನೆಲವನ್ನು ಸ್ವಚ್ಚಗೊಳಿಸಬೇಕು ಎಂದು ಈ ಸಭೆಯ ಮೂಲಕ ಜಾಗೃತಿ ಮೂಡಿಸುತ್ತಿರುವುದಾಗಿ ಸೂಚಿಸಿದರು.
ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ, ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಅಗತ್ಯ ಮುಂಜಾಗ್ರೆತೆ ವಹಿಸಬೇಕೆಂದು ಹೇಳಿದರು.
ಒಳ್ಳೆಯ ಆಹಾರ ಆರೋಗ್ಯಕ್ಕೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರ ಆರೋಗ್ಯವನ್ನು ಕಾಪಾಡುವಲ್ಲಿ ಹೋಟೆಲ್ ಮಾಲೀಕರು ಶುಚಿ-ರುಚಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾದ್ಯ. ಪ್ರಕೃತಿ ವೀಕ್ಷಣೆಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಯನ್ನು ಬಳಸುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ನಗರದ ನಾಗರೀಕರು ಹಸಿ ಕಸ, ಒಣ ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಿದ ಪರಿಣಾಮ ಕಸ ವಿಲೇವಾರಿಯಿಂದ ನಗರಸಭೆಗೆ ೧೦.೫೦ ಲಕ್ಷ ರೂ ಆದಾಯ ಬಂದಿದೆ, ಇದಕ್ಕೆ ಸಾರ್ವಜನಿಕರ ಸಹಬಾಗಿತ್ವ ಕಾರಣ ಎಂದರು.
ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಹೋಟೆಲ್ ಮಾಲೀಕರು ಸ್ವಚ್ಚತೆ ಬಗ್ಗೆ ಗಮನ ಹರಿಸುವಂತೆ ನಗರಸಭೆಯಲ್ಲಿ ಸಭೆ ನೆಡೆಸಿ ಜಾಗೃತಿ ಮೂಡಿಸಲಾಗುತ್ತದೆ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೋಟೆಲ್ನಲ್ಲಿ ಸ್ವಚ್ಚತೆ ಕಾಪಾಡಿ ಎಂದು ತಿಳಿಸಿದರು.
ಪ್ಲಾಸ್ಟಿಕ್ ಕವರುಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸಲ್ ಕೊಡುತ್ತಿರುವುದರಿಂದ ಕ್ಯಾನ್ಸರ್ ಬರುವ ಸಾದ್ಯತೆ ಇದ್ದು, ತಕ್ಷಣ ಹೋಟೆಲ್ ಮತ್ತು ಲಾಡ್ಜ್ಗಳಲ್ಲಿ ಪ್ಲಾಸ್ಟಿಕ್ ಬಾಟೆಲ್ಗಳನ್ನು ಸಂಪೂರ್ಣ ನಿಷೇದಿಸಿ ಸಹಕರಿಸಬೇಕೆಂದು ಹೇಳಿದರು.
ಲಾಡ್ಜ್, ಹೋಟೆಲ್, ಅಪಾರ್ಟ್ಮೆಂಟ್ನಲ್ಲಿ ನಗರಸಭೆ ನಿಬಂಧನೆಗಳನ್ನು ಪಾಲನೆ ಮಾಡುತ್ತಿಲ್ಲ, ಜೊತೆಗೆ ಪರವಾನಗಿಯನ್ನು ಪಡೆದುಕೊಂಡಿಲ್ಲ, ಸೂಚನೆ ಪತ್ರ ಕೊಡಲು ಅವಕಾಶ ಕೊಡದೆ ಅರ್ಜಿಯನ್ನು ಸಲ್ಲಿಸಿದ ೧ ವಾರದಲ್ಲಿ ಪರವಾನಿಗೆ ಕೊಡುತ್ತೇವೆ ಎಂದರು.
ಹೋಟೆಲ್ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣಕಸವನ್ನಾಗಿ ವಿಂಗಡಿಸಿ ನೀಡುವ ಮೂಲಕ ನಗರಸಭೆಯೊಂದಿಗೆ ಕೈ ಜೊಡಿಸಬೇಕೆಂದು ಮನವಿ ಮಾಡಿದರು.
ಸಂಚಾರಿ ಠಾಣೆ ಪೊಲೀಸ್ ಅಧಿಕಾರಿ ಧನಂಜಯ ಮಾತನಾಡಿ ನಗರದಲ್ಲಿ ಎಲ್ಲಾ ರಸ್ತೆಗಳು ಕಿರಿದಾಗಿದ್ದು, ವಾಹನ ನಿಲುಗಡೆಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡದೆ ಲಾಡ್ಜ್ ಮತ್ತು ಹೋಟೆಲ್ನಲ್ಲಿ ತಂಗಿರುವವರು ಅಲ್ಲಿಯೇ ಪಾರ್ಕಿಂಗ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇತ್ತೀಚೆಗೆ ನಗರದ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ, ದ್ವಿ-ಚಕ್ರ, ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಅಂತರ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಶಿಕ್ಷಣ, ಪರಿಸರ, ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಇಂಜಿನಿಯರ್ ಲೋಕೇಶ್,ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವ್ಯವಸ್ಥಾಪಕರಾದ ರವಿ, ಸ್ಯಾನಿಟೇಜಿ ಸೂಪರ್ವೈಸರ್ಗಳಾದ ಅಣ್ಣಯ್ಯ, ಶ್ರೀನಿವಾಸ್, ವಿವೇಕ್, ಸತೀಶ್, ಹೋಟೆಲ್ ಮಾಲೀಕರು ಮತ್ತಿತರರು ಭಾಗವಹಿಸಿದ್ದರು.
Necessary by maintaining cleanliness and social distancing in the hotel
Leave a comment