ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ಗಳು ಯಾರ್ಯಾರು, ಅವರೆಲ್ಲರೂ ಯಾರ ಮನೆಯಲ್ಲಿದ್ದವರು. ಬೆಟ್ಟಿಂಗ್ ದುಡ್ಡಲ್ಲಿ ಇವರು ಎಲೆಕ್ಷನ್ ಮಾಡಿದ್ದಾರೆ. ಕಿಂಗ್ ಪಿನ್ಗಳು ಯಾರ್ಯಾರು ಇದ್ದಾರೋ ಅವರು ಸಿಐಡಿ ತನಿಖೆಗೆ ಹೋಗಿ ತಪ್ಪು ಒಪ್ಪಿಕೊಂಡು ಬಂದಿದ್ದಾರೆ, ಯಾರನ್ನು ಮುಚ್ಚಿ ಹಾಕಿದ್ದರು ಎಲ್ಲದೂ ಗೊತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ನಗರದ ಶಂಕರಪುರ ಬಡಾವಣೆಯ ಅಮಾಯಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಹಾಕಿ ವಂಚಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಶನಿವಾರ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಫ್ಲೆಕ್ಸ್ ಹಾಕಿ ಅವರ ಋಣವನ್ನು ತೀರಿಸಿದ್ದಾರೆಂದು ಸಿ.ಟಿ. ರವಿ ಅವರು ಹೇಳಿದ್ದಾರೆಂದು ಪತ್ರಕರ್ತರು ಗಮನ ಸೆಳೆದಾಗ, ಅವರ ಫ್ಲೆಕ್ಸ್ನಲ್ಲೂ ಇದ್ದಾರೆ, ಈಗ ಅವರು ಏನು ಹೇಳುತ್ತಾರೆ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಕಲ್ಲಪ್ಪ ಹಂಡಿಬಾಗ್ ಸತ್ತಿದ್ದು ಹೇಗೆ ? ಯಾಗ ಇಲ್ಲಿ ಯಾರು ಶಾಸಕರಾಗಿದ್ದರು. ಕಲ್ಲಪ್ಪ ಹಂಡಿಬಾಗ್ ಸತ್ತಿದ್ದು ಕ್ರಿಕೆಟ್ ಬೆಟ್ಟಿಂಗ್ ಎಂದರು.
ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ಗಳು ಯಾರ ಹಿಂಬಾಲಕರು ಎಂಬುದು ಜಗಜ್ಜಾಹಿರವಾಗಿದೆ. ತನಿಖೆಗೆ ಹಾಜರಾಗಿದ್ದವರೆಲ್ಲಾ ಇಂದು ಫ್ಲೆಕ್ಸ್ ನಲ್ಲಿ ಫೋಟೋ ಹಾಕಿಕೊಂಡಿದ್ದಾರೆ. ಅವರೊಂದಿಗೆ ಇವರನ್ನು ಸಹ ಮತ್ತೊಮ್ಮೆ ತನಿಖೆಗೆ ಒಳಪಡಿಸಬೇಕೆಂದು ಪತ್ರ ಬರೆಯಬೇಕಾಗುತ್ತದೆ. ನಾನು ಯಾರ ಮೇಲೂ ಸುಮ್ಮನೆ ಆರೋಪ ಮಾಡುವುದಿಲ್ಲ, ತಪ್ಪಿತಸ್ಥರು ಯಾರಿದ್ದಾರೋ ತನಿಖೆ ಮಾಡಿ ಎಂದು ಹೇಳುತ್ತೇನೆ ಎಂದರು.
ಅಮಾಯಕ ಬಡವರ ಖಾತೆಗೆ ಹಣ ಹಾಕಿ ಮತ್ತೆ ವಾಪಸ್ ಪಡೆಯಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತನಾಡಿ, ಯಾರೂ ತಪ್ಪು ಮಾಡಿದರೂ ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೆ, ಅದಕ್ಕೆ ಪೂರಕವಾಗಿ ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಅಮಾಯಕರ ಖಾತೆಗೆ ಯಾವ ರೂಪದಲ್ಲಿ ಹಣ ಹಾಕಿದ್ದಾರೋ ಗೊತ್ತಿಲ್ಲ, ಅದೆಲ್ಲಾ ತನಿಖೆಯಿಂದ ಹೊರಗೆ ಬರಬೇಕು. ಅಮಾಯಕರು ಟ್ಯಾಕ್ಸ್ ಕಟ್ಟಬೇಕೆಂದು ಬಂದರೆ ಅವರ ಗತಿ ಏನು. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು, ಇದರ ಹಿಂದೆ ಯಾರೇ ಇರಲಿ, ಯಾವ ಪಕ್ಷದವರೇ ಆಗಿರಲಿ ಅವರನ್ನು ಬಂಧಿಸಿ, ಬಡವರಿಗೆ ನ್ಯಾಯ ಒದಗಿಸಬೇಕೆಂದು ಪೊಲೀಸ್ ಮುಖ್ಯ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಸಂಬಂಧ ಇಂದು ಮನವಿಯನ್ನು ಸಲ್ಲಿಸಲಾಗಿದೆ ಎಂದರು.
ನನ್ನ ಬರ್ತಡೇ ಫ್ಲೆಕ್ಸ್ನಲ್ಲಿ ಫೋಟೋ ಇದೆ, ಇನ್ನೊಬ್ಬರ ಬರ್ತಡೇ ಫ್ಲೆಕ್ಸ್ನಲ್ಲೂ ಫೋಟೋ ಇದೆ. ನನ್ನ ಬರ್ತಡೇ ಯಲ್ಲೂ ಸಾವಿರಾರು ಜನ ಮನೆಗೆ ಬಂದಿದ್ದರು ಫ್ಲೆಕ್ಸಿಗೆ ಫೋಟೋ ಹಾಕಿಸಿಕೊಂಡಿದ್ದರು ಫೋಟೋ ಹಾಕಿಕೊಂಡವರೆಲ್ಲರೂ ನಮ್ಮ ಆತ್ಮೀಯರೆಂದು ಹೇಳಿಕೊಳ್ಳಲಾಗುವುದಿಲ್ಲ, ವಿಶ್ವಾಸದಲ್ಲಿ ಹಾಕಿಕೊಂಡಿರುತ್ತಾರೆ. ಅವರ ಹಿನ್ನೆಲೆ ಗೊತ್ತಿರುವುದಿಲ್ಲ ಎಂದು ಹೇಳಿದರು.
ಬಿಜೆಪಿ ಶಾಸಕರು ಇದ್ದಾಗ ಈ ರೀತಿಯ ಪ್ರಕರಣ ನಡೆದಿರಲಿಲ್ಲ, ಕಾಂಗ್ರೆಸ್ ಶಾಸಕರಿದ್ದಾಗ ನಡೆದಿದೆ ಎಂದು ಯುಟ್ಯೂಬ್ ನಲ್ಲಿ ನೋಡಿದೆ. ಶಿವಮೊಗ್ಗದಲ್ಲಿ ೮೫ ಕೋಟಿ ರೂಪಾಯಿ ಈ ರೀತಿಯಲ್ಲಿ ಹಣ ಖಾತೆಗೆ ಬಂದು ಹೋಗಿದೆ. ಅಲ್ಲಿರುವವರು ಬಿಜೆಪಿ ಶಾಸಕರು, ಅಷ್ಟಕ್ಕೆ ಅವರನ್ನು ನಾನು ದೂರುವುದಿಲ್ಲ, ತನಿಖೆ ನಡೆಸುವ ಶಕ್ತಿ ನಮ್ಮ ರಾಜ್ಯ ಪೊಲೀಸರಿಗಿದೆ. ಅವರು ತನಿಖೆ ಮಾಡಿದ ಮೇಲೆ ಯಾರೆಂದು ಗೊತ್ತಾಗುತ್ತದೆ. ಇಂಥವರೇ ಈ ದಂಧೆ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ಹೇಳುವುದಾದರೆ ಪೊಲೀಸ್ ಇಲಾಖೆ ಹಾಗೂ ಇತರೆ ತನಿಖಾ ಸಮಸ್ಯೆಗಳು ಏಕೆ ಬೇಕು ? ನಿಜವಾದ ಆರೋಪಿಯನ್ನು ಹುಡುಕಿ ಅವರಿಗೆ ಶಿಕ್ಷೆ ಕೊಡಿಸಬೇಕು ಎಂದು ಹೇಳಬೇಕು, ಅಷ್ಟೇ ನಮ್ಮ ಉದ್ದೇಶ ಎಂದರು.
ಹತ್ತು ಜನ ಅಪರಾಧಿಗಳು ಸಾಕ್ಷಿ ಇಲ್ಲದೆ ಹೊರಗೆ ಬಂದರೆ ತಪ್ಪೇನಿಲ್ಲ, ಆದರೆ, ಒಬ್ಬ ನಿರಪರಾಧಿ, ಅಪರಾಧಿ ಆಗಬಾರದೆಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು ಎಂದ ಅವರು, ಈ ಪ್ರಕರಣಕ್ಕೆ ಸಂಬಂಧಿದಂತೆ ತನಿಖೆ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.
ಕರ್ನಾಟಕ ಪೊಲೀಸ್, ಅವರ ಮೇಲೆ ಅಪಾರವಾದ ನಂಬಿಕೆ ಇದೆ. ಬೆಂಗಳೂರಲ್ಲಿ ೭.೩೦ ಕೋಟಿ ರೂಪಾಯಿ ಹಣವನ್ನು ದರೋಡೆ ಮಾಡಿದವರನ್ನು ೪೮ ಗಂಟೆಗಳಲ್ಲಿ ಆರೋಪಿ ಸಮೇತ ಹಣವನ್ನು ಸೀಜ್ ಮಾಡಲಾಗಿತ್ತು. ಯಾರ ಬಗ್ಗೆ ನಾನು ಮಾತನಾಡುವುದಿಲ್ಲ. ಬಡವರ ಸಮಸ್ಯೆಗಳನ್ನು ಆಲಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಅವರಿಗೆ ಮೂಲಭೂತ ಸೌಕರ್ಯ ಕೊಡುವುದು ಶಿಕ್ಷಣ, ಆರೋಗ್ಯ ಬದುಕಿಯ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.
ಕೆಲವರಿಗೆ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಏನೂ ಮಾಡಲಾಗುವುದಿಲ್ಲ. ಹೊಟ್ಟೆ ನೋವಿಗೆ ಔಷಧಿ ಕೊಡಲು ವೈದ್ಯರಿದ್ದಾರೆ. ಆದರೆ, ಹೊಟ್ಟೆ ಕಿಚ್ಚಿಗೆ ಔಷಧಿ ಕೊಡಲು ಪ್ರಪಂಚದಲ್ಲಿ ವೈದ್ಯರು ಹುಟ್ಟಿಲ್ಲ, ಹಾಗಾಗಿ ಹೊಟ್ಟೆ ಕಿಚ್ಚು ಪಡುವವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಶನಿವಾರ ಹುಟ್ಟು ಹಬ್ಬ ಆಚರಿಸಿಕೊಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಭಾನುವಾರ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶಾಸಕರು ಶುಭ ಹಾರೈಸಿದರು.
MLA H.D. Thammayya appeals for a comprehensive investigation into the money laundering case
Leave a comment