ಚಿಕ್ಕಮಗಳೂರು: ನಗರದ ವಿವಿಧೆಡೆ ಶಾಸಕ ಎಚ್.ಡಿ.ತಮ್ಮಯ್ಯ ಅವರು ಅಧಿಕಾರಿಗಳೊಂದಿಗೆ ಹಾಗೂ ಸ್ಥಳೀಯ ನಗರಸಭಾ ಸದಸ್ಯರೊಂದಿಗೆ ಶುಕ್ರವಾರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಸೈಕಲ್ ತುಳಿ ಸಮಸ್ಯೆ ತಿಳಿ ಕಾರ್ಯಕ್ರಮ ಈ ಹಿಂದೆ ಇಲ್ಲಿನ ಮಧುವನ ಲೇಔಟ್ ನಿಂದ ಪ್ರಾರಂಭಗೊಂಡಿತ್ತು. ಆಗ ಸ್ಥಳೀಯ ನಿವಾಸಿಗರು ಮೂಲಭೂತ ಸೌಲಭ್ಯಗಳ ಬೇಡಿಕೆಯನ್ನು ಇಟ್ಟಿದ್ದರು. ಅವುಗಳಲ್ಲಿ ಹಲವು ಕೆಲಸಗಳು ಕಾರ್ಯರೂಪಕ್ಕೆ ಬಂದಿದ್ದು ನೂತನವಾಗಿ ಡಾಂಬರೀಕರಣವಾಗಿರುವ ರಸ್ತೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು.
ಮಧುವನ ಲೇಔಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಶಾಸಕರು ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಬಳಿಕ ಶಾಸಕರು ಸೈಕಲ್ನಲ್ಲಿಯೇ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಕಾಮಗಾರಿಯ ವೀಕ್ಷಣೆಗೆ ತೆರಳಿದರು.
ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದ ಅವರು, ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸಬೇಕು. ಈ ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ಕಮರ್ಷಿಯಲ್ ಮಳಿಗೆಗಳನ್ನು ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಕಾಮಗಾರಿಯನ್ನು ೨೦೨೭ರ ಮಾರ್ಚ್ ಅಂತ್ಯದೊಳಗೆ ಮುಗಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಈ ಕಟ್ಟಡದಲ್ಲಿ ಹೈಟೆಕ್ ಶೌಚಾಲಯ, ವಿಶ್ರಾಂತಿ ಕೊಠಡಿ, ತಾಯಿ ಮಗು ಆರೈಕೆ ಕೊಠಡಿ ತೆರೆಯಲು ಆದ್ಯತೆ ನೀಡಬೇಕೆಂದು ಶಾಸಕರು ಹೇಳಿದರು.
ಬಳಿಕ ಶಾಸಕರು ಮೂಡಿಗೆರೆ ರಸ್ತೆಯಲ್ಲಿ ಸೈಕಲ್ ನಲ್ಲಿಯೇ ತೆರಳುವ ವೇಳೆಯಲ್ಲಿ ಶ್ರೀ ಬೋಳರಾಮೇಶ್ವರ ವೃತ್ತದ ಬಳಿ ಶ್ರೀ ರಾಮೇಶ್ವರ ಬಡಾವಣೆಯ ನಿವಾಸಿಗರು ತಮ್ಮ ಬಡಾವಣೆಯ ಅಹವಾಲುಗಳನ್ನು ನೀಡಿದರು. ಆಗ ಶಾಸಕರು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ವೀಕ್ಷಿಸಿ ನಿಯಮದ ಪ್ರಕಾರ ಕಟ್ಟಡ ನಿರ್ಮಾಣ ಆಗಬೇಕು. ನಿಯಮ ಮೀರಿದರೆ ಕಾಮಗಾರಿ ತಡೆಯಬೇಕೆಂದು ನಗರಸಭಾ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಇದೇ ಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮತ್ತೊಂದು ಕಟ್ಟಡದ ಮಾಲೀಕರು ರಸ್ತೆ ಜಾಗ ಒತ್ತುವರಿ ಮಾಡಿರುವುದನ್ನು ಗಮನಿಸಿದ ಶಾಸಕರು ಕೂಡಲೇ ತೆರವುಗೊಳಿಸಬೇಕೆಂದು ಸೂಚನೆ ನೀಡಿದರು. ಶಾಸಕರು ತೇಗೂರಿಗೆ ತೆರಳಿ ವಾಪಸ್ ಬರುವಾಗ ನಗರಸಭೆ ಸಿಬ್ಬಂಧಿಯವರು ರಸ್ತೆ ಒತ್ತುವರಿ ಜಾಗ ತೆರವುಗೊಳಿಸಿದ್ದರು.
ನಂತರ ಶಾಸಕರು ಮೂಡಿಗೆರೆ ರಸ್ತೆಯಲ್ಲಿ ಸೈಕಲ್ ನಲ್ಲೇ ಮೆಡಿಕಲ್ ಕಾಲೇಜ್ ರಸ್ತೆ ವೀಕ್ಷಣೆಗೆ ತೆರಳುವಾಗ ರಾಂಪುರ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಶಾಸಕರು ಸೈಕಲ್ ತುಳಿ ಸಮಸ್ಯೆ ತಿಳಿ ಕಾರ್ಯಕ್ರಮವನ್ನು ಮುಂದುವರೆಸಿದರು.
MLA H.D. Thammaiah’s program to understand the problem of bicycle accidents
Leave a comment