ಚಿಕ್ಕಮಗಳೂರು: ಬೀದರ್ ಜಿಲ್ಲೆಯ ಬೆಳಕುಣಿ ಗ್ರಾಮದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಎಡಿಸಿ ನಂಜುಂಡೇಗೌಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಕೊಲೆಯಾಗಿರುವ ಅಪ್ರಾಪ್ತ ಬಾಲಕಿ ಕುಸ್ತಿ ಮತ್ತು ಕಬಡ್ಡಿ ಕ್ರೀಡಾಪಟುವಾಗಿದ್ದು, ಆಕೆಯ ಕುಸ್ತಿ ತರಬೇತುದಾರನಾದ ಲಖನ್ ಬಬ್ರು ಪವಾರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಕೊಲೆ ಮಾಡಿದ್ದಾನೆ. ಕೂಡಲೇ ಆರೋಪಿಯನ್ನು ಪೊಲೀಸರು ಎನ್ಕೌಂಟರ್ ಮಾಡಬೇಕು ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಹಾಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ನೊಂದ ಕುಟುಂಬಕ್ಕೆ ಸರ್ಕಾರ ಕನಿಷ್ಠ 5 ಎಕರೆ ಜಮೀನು ಮಂಜೂರು ಮಾಡಬೇಕು. ಅಲ್ಲದೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಲಖನ್ ಬಬ್ರು ಪವಾರ್ ಗೆ ಆಶ್ರಯ ನೀಡಿದವರ ಮೇಲೆಯೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಎಂ.ವಿ.ಭವಾನಿ, ಭೀಮಯ್ಯ, ತರಿಕೆರೆ ವೆಂಕಟೇಶ್, ಯು.ಸಿ.ರಮೇಶ್, ಜಗದೀಶ್, ಶಿವಕುಮಾರ್ ಮತ್ತಿತರರಿದ್ದರು.
Demand for action against juvenile murder accused
Leave a comment