ಕಡೂರು: ತಾಲ್ಲೂಕಿನ ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಿದ್ದು ಜನ, ಜಾನುವಾರುಗಳು ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಚೌಳಹಿರಿಯೂರು ಸೇರಿದಂತೆ ಸುತ್ತಮುತ್ತ ಇ ತಿಮ್ಮಾಪುರ, ಕುರುಬರಹಳ್ಳಿ, ತಾಂಡ್ಯ, ಮಂಜುನಾಥಪುರ ಮತ್ತಿತರ ಕಡೆ ಗ್ರಾಮದ ಹೊರವಲಯದ ಮನೆಗಳು, ತೋಟಗಳ ಆಸುಪಾಸಿನಲ್ಲಿ ನಿತ್ಯ ಚಿರತೆ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಗ್ರಾಮಸ್ಥರಲ್ಲಿ ಚಿಂತೆ ಮೂಡಿಸಿದೆ.
ಜತೆಗೆ ಗ್ರಾಮದ ಹೊರವಲಯದ ತೋಟದ ಮನೆಯ ಸಿಸಿಟಿವಿಯಲ್ಲಿ ಚಿರತೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ. ಕುಕ್ಕಸಮುದ್ರ ಕಾವಲು, ಗಂಗನ ಹಳ್ಳಿ ಕಾವಲು, ತೆಮ್ಮೆಹಳ್ಳಿ ಕಾವಲು, ಜಮ್ಮಾಪುರ ಕಾವಲು, ವೇದಾನದಿ ದಂಡೆ, ಬನ್ನಿಹಟ್ಟಿ ಕಾವಲು ಮೊದಲಾದ ವಲಯಗಳಲ್ಲಿ ಎರಡು ಚಿರತೆಗಳು ಅಡ್ಡಾಡುತ್ತಿವೆ.
ಚೌಳಹಿರಿಯೂರು ಗ್ರಾಮದ ಗಾಡಿ ಮರುಳಸಿದ್ದಪ್ಪ ಮತ್ತು ಕೊಪ್ಪಲು ಮರುಳಸಿದ್ದಪ್ಪ ಹಾಗೂ ಯತೀಶ್ ಅವರ ಕರುಗಳನ್ನು ಹೊತ್ತೊಯ್ದಿವೆ. ತಾಂಡ್ಯದ ಚಂದ್ರನಾಯ್ಕ ಮತ್ತು ನಾಗಾನಾಯ್ಕ ಎಂಬುವರಿಗೆ ಸೇರಿದ ಮೇಕೆಗಳನ್ನು ಅವರ ಕಣ್ಣೆದುರೇ ಚಿರತೆ ಹೊತ್ತೊಯ್ದಿದೆ. ಅರಣ್ಯ ಇಲಾಖೆಯವರು ಶೀಘ್ರವಾಗಿ ಚಿರತೆ ಕಾಟದಿಂದ ಈ ಭಾಗದ ಜನರಿಗೆ ಮುಕ್ತಿ ಕೊಡಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಅಶೋಕ್ ಕುಮಾರ್ ಮತ್ತು ಕೃಷಿಕ ನಂದಿ ನಾಗರಾಜ್ ಒತ್ತಾಯಿಸಿದರು.
ವಲಯ ಅರಣ್ಯಾಧಿಕಾರಿ ಎಂ.ಆರ್.ಹರೀಶ್, ‘ಯಗಟಿ-ಚೌಳಹಿರಿಯೂರು ಭಾಗದಲ್ಲಿ ಈಗಾಗಲೇ ಬೋನು ಇರಿಸಲಾಗಿದೆ. ಆದರೆ ಈ ಪ್ರಾಣಿಗಳು ಆಹಾರ ಅರಸಿ ಒಂದೆಡೆಯಿಂದ ಮತ್ತೊಂದು ಕಡೆ ಸ್ಥಳಾಂತರವಾಗುತ್ತಲೇ ಇರುತ್ತವೆ. ಚೌಳಹಿರಿಯೂರು ಭಾಗದಲ್ಲಿ ಸಮಸ್ಯೆ ಕಂಡು ಬಂದಿರುವ ಕಡೆ ಬೋನು ಇರಿಸಿ ನಾಯಿ ಕಟ್ಟಿ ಹಾಕಿ ಸೆರೆ ಹಿಡಿಯಲು ಯತ್ನಿಸಲಾಗುವುದು.
ಸ್ವಲ್ಪ ಸೂಕ್ಷ್ಮ ತಿಳಿದರೂ ಅಥವಾ ಗೊಂದಲ ಉಂಟಾದರೂ ಅವು ತಪ್ಪಿಸಿಕೊಳ್ಳುತ್ತವೆ. ಈ ಬಗ್ಗೆ ಸಿಬ್ಬಂದಿಯನ್ನು ಕಳಿಸಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.
Leopard threat in Chaulahiriyur area
Leave a comment