ಕಡೂರು: ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಪ್ರಶ್ನಿಸುವವವರಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದು, ಜನರ ಆಶೀರ್ವಾದ ಮತ್ತು ಸ್ವಾಭಿಮಾನಿ ಕಾರ್ಯಕರ್ತರ ಶ್ರಮದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕಡೂರು ಎಪಿಎಂಸಿ ಆವರಣದಲ್ಲಿ ಭಾನುವಾರ ಜೆಡಿಎಸ್ ಪಕ್ಷವು ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ, ಕಾರ್ಯಕರ್ತರ ಸಭೆ ಮತ್ತು ಪಕ್ಷದ ಸದಸ್ಯತ್ವ ನೋಂದಣಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಚೇತನ್ ಕೆಂಪರಾಜ್ ಅವರು ಜಿಲ್ಲೆಯಲ್ಲಿ ವೈ.ಎಸ್.ವಿ.ದತ್ತ ಮತ್ತು ಎಸ್.ಎಲ್. ಭೋಜೇಗೌಡರ ಮಾರ್ಗದರ್ಶನದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲಿ ಎಂದರು.
‘ಕಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕರ ಸೂಚನೆಯಂತೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಮತ್ತು ಚೇತನ್ ಅವರಿಗೆ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಚೇತನ್ ಹೇಳಿದ್ದರು. ಪೊಲೀಸರು ಮತ್ತು ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಎಚ್ಚರಿಸಿದರು.
ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಬೆಳಸಿ ಸಂಘಟನೆ ಮಾಡಿ ಎಂದರು. ಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ ಕೆ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಸುಳ್ಳಿನ ಗೋಪುರವನ್ನು ಕಟ್ಟಿದೆ. ಎಚ್.ಡಿ.ಕುಮಾರಸ್ವಾಮಿ ಅವರು 2028ರಲ್ಲಿ ಎನ್ಡಿಎ ಮೈತ್ರಿಕೂಟದಿಂದ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ ದತ್ತ ಮಾತನಾಡಿ, ಚೇತನ್ ಕೆಂಪರಾಜ್ ಆರೋಪಿಸಿದಂತೆ ಶಾಸಕರಿಂದ ದ್ವೇಷದ ರಾಜಕಾರಣ, ಕಿರುಕುಳ ನಡೆಯುತ್ತದೆ ಎಂಬುದು ಸತ್ಯ. ನನಗೂ 20 ವರ್ಷಗಳ ಹಿಂದೆಯೇ ಅನುಭವ ಆಗಿತ್ತು ಎಂದರು.
ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜ್ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದ್ವೇಷ ರಾಜಕಾರಣ ಹೆಚ್ಚಾಗಿದೆ. ನಮ್ಮ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ ಎಂದರು.
ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜೆಡಿಎಸ್ ಪಕ್ಷವು ಬೆಳೆದು ಬಂದ ಹಾದಿ ಹಾಗೂ ಸಂಘಟನೆಗಾಗಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ಹೋರಾಟದ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜುನಾಥ್, ಜಿಲ್ಲೆಯ ರಂಜನ್ ಅಜಿತ್ಕುಮಾರ್, ಬಿ.ಟಿ.ಗಂಗಾಧರನಾಯ್ಕ, ಬಿದರೆ ಜಗ ದೀಶ್, ಕೋಡಿಹಳ್ಳಿ ಮಹೇಶ್, ಹಳೆಹಟ್ಟಿ ಆನಂದನಾಯ್ಕ, ಪ್ರೇಮಕುಮಾರ್, ಎರೆಹಳ್ಳಿ ರಘು ಇದ್ದರು.
JDS will come to power in the state with the blessings of the people
Leave a comment