ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ರಬ್ಬರ್ ತೋಟವೊಂದರಲ್ಲಿ ಮನುಷ್ಯನನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಎಲ್ಲೋ ಬಿನ್ ಅವರಚ್ಚನ್ ಎಂಬುವವರಿಗೆ ಸೇರಿದ ರಬ್ಬರ್ ತೋಟದಲ್ಲಿ ಮನುಷ್ಯನ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿದ್ದು, ಇದು ಸುಮಾರು ಒಂದೂವರೆ ತಿಂಗಳಿನಿಂದ ಕಾಣೆಯಾಗಿದ್ದ ಬಿಬಿನ್ (43) ಎಂಬುವವರದ್ದೇ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಮೃತ ಬಿಬಿನ್ ಮೂಲತಃ ಕೇರಳದವರಾಗಿದ್ದು, ಕಳೆದ 15 ವರ್ಷಗಳಿಂದ ಸಿಂಸೆಯಲ್ಲಿ ವಾಸವಿದ್ದರು ಮತ್ತು ಕಳೆದ ಕೆಲವು ವರ್ಷಗಳಿಂದ ಎಲ್ಲೋ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು.
ಕಳೆದ ಮಾರ್ಚ್ 5 ರಿಂದ ಬಿಬಿನ್ ಕಾಣೆಯಾಗಿದ್ದು, ಆತ ಕೇರಳಕ್ಕೆ ಹೋಗಿರಬಹುದೆಂದು ಸಂಬಂಧಿಕರು ಭಾವಿಸಿದ್ದರು. ಆದರೆ ಬಿಬಿನ್ ತಂದೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿದಾಗ ಅನುಮಾನಗೊಂಡ ಆತನ ಅಣ್ಣ ಮಾರ್ಟಿನ್ ಅವರು ಎಲ್ಲೋ ಅವರ ಮನೆಗೆ ಹುಡುಕಿಕೊಂಡು ಹೋಗಿದ್ದಾರೆ.
ಆ ವೇಳೆ ಎಲ್ಲೋ ಕೂಡ ಮನೆಯಲ್ಲಿ ಇರಲಿಲ್ಲ. ವಿಚಾರಿಸಿದಾಗ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಾಗಿರುವುದು ತಿಳಿದುಬಂದಿದೆ. ಬಿಬಿನ್ ಕಾಣೆಯಾದ ಸಮಯ ಮತ್ತು ಎಲ್ಲೋ ಕೇಂದ್ರಕ್ಕೆ ದಾಖಲಾದ ಸಮಯ ಒಂದೇ ಆಗಿದ್ದರಿಂದ ಸಂಶಯಗೊಂಡು ಮಾರ್ಟಿನ್ ಮತ್ತು ಗ್ರಾಮಸ್ಥರು ರಬ್ಬರ್ ತೋಟದಲ್ಲಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ತೋಟದ ಗುಂಡಿಯೊಂದರಲ್ಲಿ ನಾಯಿಗಳು ಏನೋ ತಿನ್ನುತ್ತಿರುವುದು ಕಂಡುಬಂದಿದೆ. ಹತ್ತಿರ ಹೋಗಿ ನೋಡಿದಾಗ ಮನುಷ್ಯನನ್ನು ಕೊಲೆ ಮಾಡಿ ಸುಟ್ಟು ಹಾಕಿದ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಮೂಳೆಗಳು ಸಿಕ್ಕಿವೆ.
ಸಾಕ್ಷಿ ನಾಶಪಡಿಸಲು ಶವದ ಮೇಲೆ ತೆಂಗಿನ ಗರಿಗಳನ್ನು ಹಾಕಿ ಸುಡಲಾಗಿದ್ದು, ಸುತ್ತಮುತ್ತಲಿನ ಗಿಡಗಳು ಕೂಡ ಸುಟ್ಟು ಹೋಗಿವೆ. ಘಟನಾ ಸ್ಥಳದಲ್ಲಿ ಬಿಬಿನ್ ಧರಿಸುತ್ತಿದ್ದ ಜರ್ಕಿನ್ ಕೂಡ ಪತ್ತೆಯಾಗಿದೆ. ಈ ಬಗ್ಗೆ ಮಾರ್ಟಿನ್ ಅವರು ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯಾರೋ ದುಷ್ಕರ್ಮಿಗಳು ಬಿಬಿನ್ ಅವರನ್ನು ಕೊಲೆ ಮಾಡಿ ಸಾಕ್ಷಿ ನಾಶಪಡಿಸಲು ಸುಟ್ಟಿರುವ ಸಾಧ್ಯತೆ ಇದ್ದು, ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
Human skull and bones found in a rubber plantation
Leave a comment