ಚಿಕ್ಕಮಗಳೂರು: ಕಾಫಿನಾಡಿನ ರೈತರಿಗೆ ಒಂದೆಡೆ ಯೂರಿಯಾ ಗೊಬ್ಬರದ ಸಮಸ್ಯೆಯಾದರೆ ಮತ್ತೊಂದೆಡೆ ಪಹಣಿ ತಿದ್ದುಪಡಿ ಸಮಸ್ಯೆಯಿಂದಾಗಿ ಈ ಬಾರಿ ಕೃಷಿ ಚಟುವಟಿಕೆಗಳನ್ನು ನಡೆಸಲು ಹರಸಾಹಸ ಪಡುವಂತಾಗಿದೆ.
ತಲೆಮಾರುಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನ ಪಹಣಿಯಲ್ಲಿ ರೈತರ ಹೆಸರನ್ನು ತೆಗೆದು ‘ಸರ್ಕಾರಿ’ ಎಂದು ನಮೂದಿಸಿರುವುದು ರೈತರ ಜೀವನೋಪಾಯಕ್ಕೆ ದೊಡ್ಡ ಹೊಡೆತ ನೀಡಿದೆ.
ಪ್ರಮುಖವಾಗಿ, ಮೂಡಿಗೆರೆ ಹಾಗೂ ಕಡೂರು ತಾಲೂಕಿನ ಸಾವಿರಾರು ರೈತರ ಪಹಣಿಯಲ್ಲಿ ಫೂಟ್ ಐಡಿ (Fruit ID) ಇಲ್ಲದ ಕಾರಣ ರೈತರಿಗೆ ಆನ್ಲೈನ್ ಮೂಲಕ ರಸಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ.
ಮಳೆಗಾಲ ಆರಂಭವಾಗಿರುವ ಈ ಸಂದರ್ಭದಲ್ಲಿ ಭತ್ತ, ಕಾಫಿ, ಜೋಳ ಹಾಗೂ ರಾಗಿ ಬೆಳೆಗಳಿಗೆ ಗೊಬ್ಬರ ಹಾಕುವುದು ಅತ್ಯಗತ್ಯವಾಗಿದೆ. ಆದರೆ ಅಧಿಕಾರಿಗಳ ಈ ಕ್ರಮದಿಂದಾಗಿ ಖಾಸಗಿ ಅಥವಾ ಸಹಕಾರಿ ಸಂಘಗಳ ಗೊಬ್ಬರದ ಅಂಗಡಿಗಳಲ್ಲಿ ರೈತರಿಗೆ ಗೊಬ್ಬರ ನೀಡಲಾಗುತ್ತಿಲ್ಲ.
ತಂಬ್ ಇಂಪ್ರೆಶನ್ ನೀಡಿದರೂ ಪಹಣಿಯಲ್ಲಿ ಹೆಸರಿಲ್ಲದ ಕಾರಣ ತಾಂತ್ರಿಕವಾಗಿ ಗೊಬ್ಬರ ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಬೆಳೆಗಳಿಗೆ ಸರಿಯಾದ ಸಮಯಕ್ಕೆ ಪೋಷಕಾಂಶ ನೀಡಲು ಸಾಧ್ಯವಾಗದೆ ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ.
ನ್ಯಾಯಾಲಯವು ಈ ವಿಚಾರದಲ್ಲಿ ಸ್ಪಷ್ಟವಾಗಿ ತಡೆಯಾಜ್ಞೆ ನೀಡಿದ್ದರೂ ಸಹ, ಜಿಲ್ಲಾಡಳಿತವು ಪಹಣಿಯಲ್ಲಿ ಹಳೆಯ ಸ್ಥಿತಿಯನ್ನು ಮರುಸ್ಥಾಪಿಸದ ಕಾರಣ ರೈತರು ಕೃಷಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ.
ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಸುಲಭವಾಗಿ ರಸಗೊಬ್ಬರ ಹಾಗೂ ಇತರ ಕೃಷಿ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ರೈತ ಹಿತರಕ್ಷಣಾ ವೇದಿಕೆಯು ಒತ್ತಾಯಿಸಿದೆ.
Farmers’ scramble to resolve land title amendment issue
Leave a comment