ಕಡೂರು : ಮಕ್ಕಳ ಆಟದ ವಿಚಾರಕ್ಕೆ ಶುರುವಾದ ಸಣ್ಣ ವಾಗ್ವಾದವೊಂದು ಮಚ್ಚು, ಕಲ್ಲು ತೂರಾಟದಂತಹ ಭೀಕರ ಹಲ್ಲೆಯಾಗಿ ಮಾರ್ಪಟ್ಟಿರುವ ಘಟನೆ ಕಡೂರು ತಾಲ್ಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ವಕ್ಕಲಗೆರೆ ಬೋವಿಹಟ್ಟಿಯಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕನ್ನಿಕಾ ಕುಟುಂಬದ ವಿರುದ್ಧ ಚೈತ್ರಾ ಅವರು ಪ್ರತಿ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೂರಿನ ಸಾರಾಂಶದಂತೆ, ಚೈತ್ರಾ ಅವರ ತಂಗಿಯ ಮಗ ಗೌತಮ್ ಎಂಬ ಆರು ವರ್ಷದ ಬಾಲಕ ಆಟವಾಡುತ್ತಿದ್ದಾಗ ನೆರೆಮನೆಯ ಕನ್ನಿಕಾ ಎಂಬುವವರು ಮಗುವಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಇದನ್ನು ಪ್ರಶ್ನಿಸಲು ಹೋದ ಚೈತ್ರಾ ಅವರ ಕೂದಲನ್ನು ಹಿಡಿದು ಎಳೆದಾಡಿದ ಕನ್ನಿಕಾ ಮತ್ತು ಆಕೆಯ ಅಣ್ಣ ಶಿವಕುಮಾರ್, ಕಲ್ಲಿನಿಂದ ಹಲ್ಲೆ ನಡೆಸಿ ರಕ್ತಗಾಯ ಮಾಡಿದ್ದಾರೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಕನ್ನಿಕಾ ಅವರು ಮನೆಯಿಂದ ಮಚ್ಚು ತಂದು ಚೈತ್ರಾ ಅವರ ತಂಗಿ ಶಿಲ್ಪಾ ಅವರ ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಹಾಗೂ ಮಗಳ ಮೇಲೆಯೂ ತೆಂಗಿನಕಾಯಿಯಿಂದ ಹೊಡೆದಿದ್ದರಿಂದ ಹಲ್ಲು ಮುರಿದು ಗಾಯವಾಗಿದೆ ಎಂದು ಚೈತ್ರಾ ದೂರಿನಲ್ಲಿ ವಿವರಿಸಿದ್ದಾರೆ.
ಸದ್ಯ ಹಲ್ಲೆಗೊಳಗಾದವರು ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಜಗಳಕ್ಕೆ ಭದ್ರ ಎಂಬುವವರ ಕುಮ್ಮಕ್ಕೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಯಗಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಒಂದೇ ಹಳ್ಳಿಯ ನೆರೆಮನೆಯವರು ಸಣ್ಣ ಕಾರಣಕ್ಕೆ ಈ ರೀತಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
A fight over a trivial reason – a fight between two families
Leave a comment