ಚಿಕ್ಕಮಗಳೂರು: ರೈತರು ನೈಸರ್ಗಿಕ ಮತ್ತು ಸಮಗ್ರ ಕೃಷಿಯತ್ತ ಹೆಚ್ಚಿನ ಗಮನಹರಿಸಿದಾಗ ಮಾತ್ರ ಆರ್ಥಿಕ ಸಬಲತೆ ಸಾಧ್ಯ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಕಳಸಾಪುರದ ಕರಾಳಮ್ಮ ದೇವಸ್ಥಾನದ ಆವರಣದಲ್ಲಿ ಐಸಿರಿ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಳಸಾಪುರ ಗ್ರಾ.ಪಂ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಐಸಿರಿ ಫಿಟ್ನೆಸ್ ಚೆಕ್ ಮತ್ತು ರಾಷ್ಟ್ರೀಯ ರೈತ ದಿನದ ಅಂಗವಾಗಿ ‘ರೈತ ದೇವೋಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಅಗತ್ಯ ಇರುವ ಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಭರವಸೆ ನೀಡಿದರು.
ರೈತನ ಬದುಕನ್ನು ಹಸನು ಮಾಡುವ ಜೊತೆಗೆ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಸರ್ಕಾರದ ಉದ್ದೇಶ, ಜನಪ್ರತಿನಿಧಿಗಳ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಸಾರ್ವಜನಿಕ ಸಹಭಾಗಿತ್ವ ವಹಿಸಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಹಿಂದೆ ರೈತರು ಸ್ವಾವಲಂಬಿಗಳಾಗಿದ್ದರು. ಈಗ ಪರಾವಲಂಬಿಗಳಾಗಿದ್ದಾರೆ. ಕೃಷಿಕರು ಸ್ವಾಭಿಮಾನಿಗಳಾಗಿ ಬದುಕಬೇಕು. ರೈತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ದೇಶದ ಸಂಸ್ಕೃತಿ, ಸಂಸ್ಕಾರ ಕಲಿತು ಉತ್ತಮ ಪ್ರಜೆಗಳಾಗುತ್ತಾರೆಂದು ಕರೆನೀಡಿದರು.
ಕಳೆದ ಒಂದು ವರ್ಷದಿಂದ ಐಸಿರಿ ಫೌಂಡೇಶನ್ ವಿವಿಧ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮೂವರು ಕೃಷಿಕರಿಗೆ ಸಾಧಕ ಪ್ರಶಸ್ತಿ, ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡುವ ಮೂಲಕ ಇದೊಂದು ಉತ್ತಮವಾದ ಮಾದರಿ ಕಾರ್ಯಕ್ರಮವಾಗಿದೆ ಎಂದು ಬಣ್ಣಿಸಿದರು.
ದೇಶದಲ್ಲಿ ಕೃಷಿ ಮತ್ತು ಕೃಷಿ ಕಾರ್ಮಿಕರಾಗಿ ಶೇ.೭೦ ರಷ್ಟು ರೈತ ಕುಟುಂಬಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ, ಜಾತ್ರೆ ಹೀಗೆ ನಾನಾ ರೀತಿಯ ಕಾರ್ಯಕ್ರಮ ಆಯೋಜಿಸುತ್ತಾರೆ. ಆದರೆ, ರೈತರಿಗಾಗಿ ಕಾರ್ಯಕ್ರಮ ಏರ್ಪಡಿಸುವುದು ತುಂಬಾ ವಿರಳ ಎಂದು ವಿಷಾಧಿಸಿದರು.
ಅಧ್ಯಕ್ಷತೆ ವಹಿಸಿದ್ದ ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಮಾತನಾಡಿ, ತಂದೆ-ತಾಯಿಯನ್ನು ದೇವರ ಸಮಾನ ಎನ್ನುತ್ತೇವೆ, ಅದೇ ರೀತಿ ರೈತರೂ ಕೂಡ ದೇವರಿಗೆ ಸಮಾನವಾಗಿರುವುದು ರೈತ ದೇವೋಭವ ಎಂದು ಕಾರ್ಯಕ್ರಮ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಐಸಿರಿ ಫೌಂಡೇಶನ್ ರೈತರಿಗಾಗಿ, ರೈತರಿಗೋಸ್ಕರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ, ರೈತ ಸ್ನೇಹಿ ಮೂರು ಕಾರ್ಯಕ್ರಮಗಳ ಲೋಗೋ ಅನಾವರಣ, ಮಾದರಿ ಕೃಷಿಕ ಪ್ರಶಸ್ತಿಯನ್ನು ಸ್ಥಳೀಯರಾದ ಕುಮಾರಸ್ವಾಮಿ, ರಮೇಶ್, ನಾಗರಾಜ್ ಇವರುಗಳಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನೈಸರ್ಗಿಕ ಕೃಷಿಕರಾದ ಚಂದ್ರಶೇಖರ್ ನಾರಾಣಾಪುರ, ಬ್ರಹ್ಮಾಕುಮಾರೀಸ್ನ ರಾಜಯೋಗಿನಿ ಡಾ. ಬಿ.ಕೆ ಭಾಗ್ಯಕ್ಕ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ಕಳಸಾಪುರ ಗ್ರಾ.ಪಂ ಅಧ್ಯಕ್ಷೆ ಶಿವರತ್ನ, ಉಪಾಧ್ಯಕ್ಷೆ ಶ್ವೇತಾ, ಶಂಕರ್ನಾಯ್ಕ್, ಸೋಮಣ್ಣ, ಅಚ್ಚುತ್ರಾವ್, ಯೋಗೀಶ್, ತಿಮ್ಮೇಗೌಡ, ಮಾವಿನಕೆರೆ ದಯಾನಂದ್, ಸಚಿನ್ಸಿಂಗ್, ಲತಾ ನಟೇಶ್, ಭಾಗ್ಯ, ಕಲ್ಪನ, ಶೈಲಾ, ಮತ್ತಿತರರು ಉಪಸ್ಥಿತರಿದ್ದರು.
ಐಐಪಿ ಮುಖಂಡ ನಂಜೇಶ್ ಬೆಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಶಶಾಂಕ್ ಸ್ವಾಗತಿಸಿ, ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
Economic empowerment when farmers prioritize natural farming
Leave a comment