ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ನಮ್ಮ ಸಂಸ್ಕೃತಿಯ ಅರಿವಿಗೆ ಬಹಳ ಮುಖ್ಯ. ಸಂಗೀತ, ನೃತ್ಯ ನಮ್ಮ ಸಂಸ್ಕೃತಿಯನ್ನು ತಿಳಿಸುವುದಲ್ಲದೆ, ಚರ್ಚಾಸ್ಪರ್ಧೆಗಳು ಮತ್ತು ರಸಪ್ರಶ್ನೆಗಳು ನಮ್ಮ ವೈಚಾರಿಕ ಮನೋಭಾವವನ್ನು ವೃದ್ಧಿಸುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕಿ ಮಂಜುಳ ಕೆ. ತಿಳಿಸಿದರು.
ನಗರದ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ ಇಲಾಖೆಯ ನಿಯಮಾನುಸಾರ ನಡೆಯುವ ಈ ಸ್ಪರ್ಧೆಗಳಲ್ಲಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟಗಳ ಸ್ಪರ್ಧೆಗಳಿದ್ದು, ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ನಗದು ಪುರಸ್ಕಾರ ಮತ್ತು ಪ್ರಮಾಣ ಪತ್ರಗಳನ್ನು ಪ್ರತೀ ಹಂತದಲ್ಲೂ ನೀಡಲಾಗುತ್ತಿದೆ. ಕಠಿಣ ಸಾಧನೆಯಿಂದ ಮಾತ್ರ ನಾವು ವಿಜಯಶಾಲಿಗಳಾಗಬಹುದು. ಕಾಟಾಚಾರದ ಭಾಗವಹಿಸುವಿಕೆಯಿಂದ ಏನೂ ಪ್ರಯೋಜನವಿಲ್ಲ ಎಂದು ಅವರು ನುಡಿದರು.
ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವಿದ್ಯಾರ್ಥಿ ಸ್ನೇಹಿ ಆಗಿದ್ದು, ಮಕ್ಕಳು ವಿವಿಧ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಇದ್ದರೂ ಪರೀಕ್ಷೆಯನ್ನು ಎದುರಿಸಲು ಅನುಕೂಲವಾಗುವಂತೆ ಪ್ರಶ್ನೆ ಕೋಠಿ, ಪ್ರಶ್ನೆಪತ್ರಿಕೆಗಳ ನೀಲನಕ್ಷೆ, ಶೇ.೧೦೦ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇಲಾಖೆಯ ಜಾಲತಾಣ ಪೋರ್ಟಲ್ನಲ್ಲಿ ಪ್ರಕಟಿಸಿರುವುದು ವಿದ್ಯಾರ್ಥಿಗಳ ಪಾಲಿಗೆ ನಿಜಕ್ಕೂ ವರದಾನವಾಗಿದ್ದು, ನಿರಾತಂಕವಾಗಿ ಸರ್ವತೋಮುಖವಾಗಿ ಹೆಜ್ಜೆ ಹಾಕಲು ನೆವಾಗುತ್ತಿದೆ ಎಂದರು.
ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜೆ.ಜಿ.ಸುರೇಶ್ ಮಾತನಾಡಿ, ಇಲಾಖೆಯೊಂದಿಗೆ ನಮ್ಮ ಸಂಘವು ಸಂಪೂರ್ಣ ಸಹಕಾರ ನೀಡುತ್ತಿದೆ. ನಮ್ಮ ವಿದ್ಯಾರ್ಥಿಗಳೇ ನಮ್ಮ ಶಕ್ತಿ. ಅವರನ್ನು ಸರ್ವತೋಮುಖವಾಗಿ ರೂಪಿಸುವುದೇ ಉಪನ್ಯಾಸಕರ, ಪ್ರಾಚಾರ್ಯರ ಹಾಗೂ ಇಲಾಖೆಯ ಕರ್ತವ್ಯವಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ ಮಾತನಾಡಿ, ಸಾಂಸ್ಕೃತಿಕ ಸ್ಪರ್ಧೆಗಳು ಪ್ರತೀ ಶೈಕ್ಷಣಿಕ ವರ್ಷದ ಹಬ್ಬಗಳಿದ್ದಂತೆ. ಪ್ರತೀ ಕಾಲೇಜುಗಳಿಂದ ಆಗಮಿಸುವ ವಿದ್ಯಾರ್ಥಿಗಳು ಇಲ್ಲಿ ಸ್ಪರ್ಧಾಳುಗಳು ಮಾತ್ರವಲ್ಲದೆ, ಸ್ನೇಹ ಬೆಳೆಸಿಕೊಳ್ಳುವ ಗುಣವನ್ನು ರೂಪಿಸಿಕೊಳ್ಳಬೇಕು ಮತ್ತು ಪ್ರತಿಸ್ಪರ್ಧಿಗಳ ಪ್ರತಿಭೆಯನ್ನು ಮೆಚ್ಚಿ ಗೌರವಿಸಬೇಕು ಎಂದರು.
೨೦೨೨ನೇ ಸಾಲಿಗೆ ರಾಜ್ಯ ಸರ್ಕಾರದಿಂದ ಆಯ್ಕೆಯಾದ ಉತ್ತಮ ಚಲನಚಿತ್ರ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಗುರು ಮತ್ತು ಶಿಷ್ಯರ ಬಾಂಧವ್ಯ ಹೇಗಿರಬೇಕು ಮತ್ತು ಗುರುವಿನ ಮಹತ್ವವೇನು ಎಂಬುದನ್ನು ಸಾರುವ ಗೀತೆಯನ್ನು ತಮ್ಮ ಸಿರಿಕಂಠದಿಂದ ಪ್ರಸ್ತುತಪಡಿಸಿ ಸಮಾರಂಭಕ್ಕೆ ಸಾಂಸ್ಕೃತಿಕ ಸಂಚಲನ ನೀಡಿದರು.
ಪ್ರಾಚಾರ್ಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ತಸ್ನೀಮಾ ಫಾತಿಮಾ, ಮಾಜಿ ಅಧ್ಯಕ್ಷ ಕೆ.ಪಿ.ಉಮಾಮಹೇಶ್ವರಪ್ಪ, ಮಾಜಿ ಖಜಾಂಚಿ ನಾಗರಾಜರಾವ್ ಹೆಚ್.ಎಂ., ಹಾಲಿ ಖಜಾಂಚಿ ಸೋಮಶೇಖರ್, ಪ್ರಾಚಾರ್ಯರುಗಳಾದ ಸತೀಶ್ ಶಾಸ್ತ್ರಿ, ಲೋಲಾಕ್ಷಿ, ಪೂರ್ಣೇಶ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ್ ಸ್ವಾಗತಿಸಿದರು. ಚಂದ್ರಶೇಖರ್ ಆರ್.ಕೆ. ನಿರೂಪಿಸಿದರು. ಲಕ್ಷ್ಮೀ ಬಿ.ಎಸ್. ವಂದಿಸಿದರು.
ಭಾವಗೀತೆ, ಜನಪದ ಗೀತೆ, ಚರ್ಚಾಸ್ಪರ್ಧೆ, ಜನಪದ ನೃತ್ಯ, ರಸಪ್ರಶ್ನೆ, ಏಕಪಾತ್ರಾಭಿನಯ, ಚಿತ್ರಕಲೆ, ಪ್ರಬಂಧ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಉಪನಿರ್ದೇಶಕರು ಬಹುಮಾನ ವಿತರಿಸಿದರು.
Debates and quizzes increase rationality
Leave a comment