ಕೊಪ್ಪ: ‘ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2023ರಲ್ಲಿ ಬಾಲಕಿ ಮೃತಪಟ್ಟ ಜಾಗದಲ್ಲೇ ವಾರದ ಹಿಂದೆ ಇನ್ನೊಬ್ಬಳು ಬಾಲಕಿ ಮೃತಪಟ್ಟಿದ್ದಾಳೆ. ಸಾರ್ವಜನಿಕರಂತೆಯೇ ನಮ್ಮಲ್ಲೂ ಅನುಮಾನ ಮೂಡಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕಿಯ ಸಾವಿನ ಸಮಗ್ರ ತನಿಖೆಯಾಗಬೇಕು ಎನ್ನುವ ಉದ್ದೇಶದಿಂದಲೇ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ಕೂಡಲೇ ಪ್ರಾಮಾಣಿಕ ತನಿಖೆ ಮಾಡಿಸಲಾಗುವುದು. ವಸತಿ ಶಾಲೆಯಲ್ಲಿ ಎಲ್ಲಾ ಅಧಿಕಾರಿ, ಪೋಷಕರನ್ನು ಕರೆಯಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಸಲಾಗುವುದು ಎಂದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಖಾಂಡ್ಯ ಹೋಬಳಿಗೆ ಗ್ಯಾರಂಟಿ ಯೋಜನೆಗಾಗಿ ಪ್ರತಿವರ್ಷ ₹250 ಕೋಟಿ ಅನುದಾನ ಖರ್ಚು ಮಾಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಅದೆಷ್ಟೋ ಜನ ಊಟವಿಲ್ಲದೆ ಹಸಿವಿನಿಂದ, ಔಷಧಿ ಮಾತ್ರೆಗಳಿಲ್ಲದೆ ಕಂಗೆಟ್ಟಿದ್ದರು. ಗ್ಯಾರಂಟಿ ಯೋಜನೆಗಳಿಂದ ಇದಕ್ಕೆ ಮುಕ್ತಿಕಂಡಿದೆ. ಸರ್ಕಾರದ ಏಳಿಗೆಯನ್ನು ಸಹಿಸದ ವಿಪಕ್ಷಗಳು ಸರ್ಕಾರದ ಮೇಲೆ ಮತ್ತು ನನ್ನ ಮೇಲೆ ಸದಾ ಟೀಕೆಗಳನ್ನು ಮಾಡುತ್ತಿವೆ ಎಂದು ದೂರಿದರು.
ಬಿಜೆಪಿ ಸಮಯದಲ್ಲಾದ ಅಭಿವೃದ್ಧಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಾದ ಅಭಿವೃದ್ಧಿಗೂ ಅಜಗಜಾಂತರ ವ್ಯತ್ಯಾಸವಿದ್ದು ಬಿಜೆಪಿಯ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರಗಳು ನಡೆದಿದ್ದವು. ಕ್ಷೇತ್ರದ ಅಭಿವೃದ್ಧಿ ಮತದಾರರಿಗೆ ತಿಳಿದಿದೆ. ವಿಪಕ್ಷಗಳ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ಅನಾವಶ್ಯಕ ಟೀಕೆಗಳಿಗೆ ಉತ್ತರಿಸುವುದಿಲ್ಲ ಎಂದರು.
ಕೊಪ್ಪದಲ್ಲಿ ₹12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಯಪುರದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶೃಂಗೇರಿಯ ನೂರು ಹಾಸಿಗೆಗಳ ಆಸ್ಪತ್ರೆಯ ಶಂಕುಸ್ಥಾಪನೆ ಜು. 7ರಂದು ಉದ್ಘಾಟನೆಯಾಗಬೇಕಿತ್ತು. ಜುಲೈನಲ್ಲಿ ಅತಿಯಾದ ಮಳೆಯ ಕಾರಣದಿಂದ ಜಿಲ್ಲಾಧಿಕಾರಿ ರೆಡ್ ಅಲರ್ಟ್ ಘೋಷಿಸಿದ್ದ ಕಾರಣ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಕುಕ್ಕುಡಿಗೆ, ಮುಖಂಡರಾದ ಎಚ್.ಎಂ.ಸತೀಶ್, ಎಚ್.ಎಸ್.ಇನೇಶ್, ಕೆ.ಟಿ.ಮಿತ್ರ, ಅನ್ನಪೂರ್ಣ ನರೇಶ್, ಓಣಿತೋಟ ರತ್ನಾಕರ್, ಸಂದೇಶ್, ವಿಜಯಕುಮಾರ್, ಸತೀಶ್ ಪೂಜಾರಿ, ಜೇಸುದಾಸ್ ಇದ್ದರು.
Death of residential school girl raises suspicions
Leave a comment