ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು ಬಿಜೆಪಿ ಹಾಗೂ ಸಂಘಪರಿವಾರದವರು ಗಂಗಾಜಲ ಸಿಂಪಡಣೆ ಮಾಡುವ ಮೂಲಕ ಶುದ್ಧೀಕರಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಜಾದ್ ಪಾರ್ಕ್ ವೃತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ನೊಂದವರು ಬಡವರು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡಿರುವುದು ಅವರಿಗೆ ಮಾಡಿರುವ ಅಪಮಾನವಲ್ಲ. ಬದಲಿಗೆ ಇಡೀ ದೇಶದ ಜನರಿಗೆ, ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ. ಈ ಘಟನೆಯಿಂದ ಇಡೀ ನಾಗರಿಕ ಸಮಾಜ ತೆರೆತಗಿಸುವಂತಾಗಿದೆ. ಜೊತೆಗೆ ಸಂವಿಧಾನದ ಆಶಯ ಹಾಗೂ ಮೂಲ ವಿಚಾರಧಾರೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಅಂಗಸಂಸ್ಥೆಗಳು ಹಂತ ಹಂತವಾಗಿ ಪ್ರಜಾಪ್ರಭುತ್ವವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಈ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನ ಶ್ರಮವಿರಬೇಕು. ಆದರೆ ಬಿಜೆಪಿ ಹಾಗೂ ಸಂಘ ಪರಿವಾರ ಜಾತಿ ಜಾತಿ ಎಂದು ಸಮಾಜವನ್ನು ಪ್ರತ್ಯೇಕಿಸುವ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನ ಶುದ್ಧಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಲ್ಲಿನ ಆಡಳಿತ ಪಕ್ಷ ಮೌನವಾಗಿರುವುದು ಘಟನೆಯನ್ನು ಸಮರ್ಥಿಸಿಕೊಳ್ಳುವಂತಿದೆ. ಈ ರೀತಿಯ ಘಟನೆಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಇದರ ವಿರುದ್ಧ ಹೋರಾಟ ನಡೆಸಿದರೆ ಆ ಹೋರಾಟದ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಹಾಗೂ ಸಂಘ ಪರಿವಾರ ಮಾಡುತ್ತಿದೆ. ಬಿಜೆಪಿ ನಾಯಕರು ನೀಟ್ ಅಕ್ರಮ ಹಾಗೂ ರಾಮಮಂದಿರದ ಅವ್ಯವಾಹರದ ಬಗ್ಗೆ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಬಿಜೆಪಿ ಹಾಗೂ ಸಂಘ ಪರಿವಾರ ಮನುವಾದ ಒಪ್ಪಿಕೊಂಡಿದೆ. ಇದರಿಂದಾಗಿಯೇ ಅವರು ಜನರಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಲು ಬಿಡುತ್ತಿಲ್ಲ. ಇದೇ ಕಾರಣದಿಂದಾಗಿಯೇ ಭಾರತದ ಶಕ್ತಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆ. ಇದು ಇಡೀ ಪ್ರಜ್ಞಾವಂತ ಸಮಾಜಕ್ಕೆ ಮಾಡಿರುವ ಅಪಮಾನ. ಶ್ರೀರಾಮ ಹಿಂದುಗಳಿಗೆ ಶ್ರೇಷ್ಠ ಎಂದು ಹೇಳಿ ಶ್ರೀರಾಮನ ಹುಂಡಿಯಿಂದಲೇ ಹಣ ಕದ್ದಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ಕಲ್ಲು, ಇಟ್ಟಿಗೆಗಳನ್ನು ಮಾಡಿಕೊಂಡಿದ್ದಾರೆ. ಶ್ರೀ ರಾಮನ ಹೆಸರು ಹೇಳಿಕೊಂಡು ಏನೇನು ಅನಾಚಾರ ಮಾಡಲು ಸಾಧ್ಯವೊ ಎಲ್ಲವನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ದಲಿತರು ಎಂಬ ಕಾರಣಕ್ಕೆ ಅವರು ಭಾಷಣ ಮಾಡಿ ಹೋದ ಜಾಗವನ್ನು ಗಂಗಾಜಲ ಹಾಕಿ ಶುದ್ಧಗೊಳಿಸಿರುವುದು ಇಡೀ ದೇಶದ ಜನರಿಗೆ ಮಾಡಿರುವ ಅವಮಾನ ಎಂದು ಹೇಳಿದರು.
ಅಂಬೇಡ್ಕರ್ ಅವರಿಗೆ ಕುಡಿಯಲು ನೀರು ನೀಡದ, ಶಾಲೆಯಲ್ಲಿ ಕೂರಲು ಅವಕಾಶ ನೀಡದ ಆರ್ಎಸ್ಎಸ್ ಇಂದಿಗೂ ಜೀವಂತವಿದೆ. ಇದೇ ಆರ್ ಎಸ್ ಎಸ್ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅವಮಾನ ಮಾಡಿದೆ. ದೇಶದ ಹಿಂದುಳಿದ ಹಾಗೂ ಶೋಷಿತ ದಲಿತ ಸಮಾಜದ ಜನ ಮುಂಬರುವ 2029 ರ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂಸಿ ಶಿವಾನಂದ ಸ್ವಾಮಿ, ಮಲ್ಲೇಶ್ ಸ್ವಾಮಿ, ಎಚ್.ಮಹಮದ್, ರೂಬೆನ್ ಮೊಸೆಸ್, ಬೆಟಗೆರೆ ಪ್ರವೀಣ್, ಸಂತೋಷ್, ಲಾಕೇಶ್, ಶ್ರೀಕಾಂತ್, ಆಲ್ದೂರು ಸುರೇಶ್ ಮತ್ತಿತರರಿದ್ದರು.
Congress protests against BJP-Sangh Parivar
Leave a comment