ಚಿಕ್ಕಮಗಳೂರು : ಕಾಫಿನಾಡಿನ ಕಾಂಗ್ರೆಸ್ ನಗರಸಭಾ ಸದಸ್ಯ ಸಾರ್ವಜನಿಕವಾಗಿ ದರ್ಪ ಮೆರೆದ ಘಟನೆ ವರದಿಯಾಗಿದೆ. ನಗರಸಭೆಯ 34ನೇ ವಾರ್ಡಿನ ಸದಸ್ಯ ಲಕ್ಷ್ಮಣ್ ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂಬುವವರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಸೈಟ್ ವಿಚಾರಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯ ಈ ಸಂಘರ್ಷಕ್ಕೆ ಕಾರಣ ಎನ್ನಲಾಗುತ್ತಿದ್ದು,
ವಿಶೇಷವೆಂದರೆ ಈ ಹಲ್ಲೆಯಲ್ಲಿ ಚಂದ್ರಶೇಖರ್ ಪತ್ನಿಯೂ ಲಕ್ಷ್ಮಣ್ ಅವರಿಗೆ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಡು ರಸ್ತೆಯಲ್ಲೇ ರೌಡಿಗಳಂತೆ ವರ್ತಿಸಿದ ಕೌನ್ಸಿಲರ್, ಚಂದ್ರಶೇಖರ್ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ದೂರು ಕೇಳಿ ಬಂದಿದೆ..
ಘಟನೆಯಿಂದ ಗಾಯಗೊಂಡ ಚಂದ್ರಶೇಖರ್ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದೃಶ್ಯಗಳನ್ನು ಕಂಡ ಸ್ಥಳೀಯರು, “ನಾವು ಓಟು ಹಾಕಿ ಗೆಲ್ಲಿಸಿದ್ದು ಇವರಿಂದ ಪೆಟ್ಟು ತಿನ್ನಲಕ್ಕಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Congress municipal council member assaults local resident
Leave a comment