ಚಿಕ್ಕಮಗಳೂರು: ಜಿಲ್ಲೆಯ ಬಯಲು ಮತ್ತು ಮಲೆನಾಡು ಭಾಗದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರೊ. ನಂಜುಂಡಸ್ವಾಮಿ ಅವರ ಮೂಲ ಸಂಘಟನೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕವನ್ನು ಸ್ಥಾಪಿಸಿದ್ದು, ರೈತ ಪರ ಹೋರಾಟ ಮುಂದುವರಿಯಲಿದೆ ಎಂದು ನೂತನ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಟಿ.ಆನಂದ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮೂಹಿಕ ನಾಯಕತ್ವದಡಿಯಲ್ಲಿ ನೂತನ ಸಂಘಟನೆ ಹುಟ್ಟು ಹಾಕಲಾಗಿದೆ. ಈಗಾಗಲೇ ವಿವಿಧ ತಾಲೂಕು ಮತ್ತು ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗೌರವ ಅಧ್ಯಕ್ಷರಾಗಿ ಚನ್ನಬಸಪ್ಪ, ಮಹಿಳಾ ಅಧ್ಯಕ್ಷೆ ಕೆಂಪಮ್ಮ, ಕಡೂರು ಕೃಷ್ಣಮೂರ್ತಿ, ತರೀಕೆರೆ ಚಂದ್ರಶೇಖರ್, ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಸಂಪತ್ಕುಮಾರ್, ವಸ್ತಾರೆ ಹೋಬಳಿಗೆ ಜೀವನ್ ನೆರಡಿ, ಕಾರ್ಯದರ್ಶಿಯಾಗಿ ಸಂತೋಷ್, ಲಕ್ಯಾ ಅಧ್ಯಕ್ಷರಾಗಿ ಜಗದೀಶ್, ಕಾರ್ಯದರ್ಶಿ ವಸಂತ್ಕುಮಾರ್, ಅಂಬಳೆಗೆ ಮಂಜೇಗೌಡ, ರಂಗೇಗೌಡ ಅವರನ್ನು ಕ್ರಮವಾಗಿ ಅಧ್ಯಕ್ಷ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಕಡೂರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ತೋರಿಸಿ ಪೌತಿಖಾತೆ ಮಾಡಿಕೊಡಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು. ನೆರಡಿ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲ. ಈರುಳ್ಳಿ ಬೆಲೆ ಕುಸಿದಿದ್ದು ಬೆಳೆಗಾರ ಸಂಕಷ್ಟದಲ್ಲಿದ್ದಾನೆ ಈ ಸಂದರ್ಭ ಸರಕಾರ ನೆರವಿಗೆ ಬರಬೇಕು. ಕಡೂರು ತಾಲೂಕಿನ ನೀರಾವರಿ ಯೋಜನೆಗಳನ್ನು ಸಮರ್ಪವಾಗಿ ನಿರ್ವಹಿಸುವುದು ಸೇರಿದಂತೆ ಮತ್ತಿತರೆ ಸಮಸ್ಯೆ ಮುಂದಿಟ್ಟುಕೊಂಡು ಮುಂದಿನ ದಿನದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೂತನ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Chukki Nanjundaswamy Farmers’ Association comes into existence
Leave a comment