ಚಿಕ್ಕಮಗಳೂರು : ಕೃಷಿಕರು, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ೨೦೨೫-೨೬ ನೇ ಸಾಲಿನ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಇತರೆ ನಿಗಮಗಳಡಿ ಅನುಷ್ಠಾನಗೊಳಿಸಲಾಗುತ್ತಿರುವ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಹಾಗೂ ?ಸ್ವಾವಲಂಬಿ ಸಾರಥಿ? ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಕ್ಷಣ, ಕೇವಲ ಬದುಕಲು ಅಲ್ಲ. ಜೀವನ ಕಲಿಯಲು ಅಗತ್ಯವಿದೆ. ಸಮ ಸಮಾಜ ನಿರ್ಮಾಣ ಆಗಬೇಕಾದರೆ ಶಿಕ್ಷಣ ಪಡೆಯಬೇಕೆಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು ಎಂದ ಅವರು, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂದರು.
ದೇವರಾಜ ಅರಸ್ ಅವರು ಈ ದೇಶ ಕಂಡಂತಹ ಧೀಮಂತ ನಾಯಕರು, ಅವರ ಹೆಸರಿನಲ್ಲಿ ಸರ್ಕಾರ ಹಿಂದುಳಿದ ವರ್ಗಗಳ ರೈತರ ಬದುಕನ್ನ ಹಸನಗೊಳಿಸಲು, ಸಮ ಸಮಾಜ ನಿರ್ಮಾಣ ಮಾಡಬೇಕು, ಆರ್ಥಿಕವಾಗಿ ಸಾಮಾಜಿಕವಾಗಿ ಸಮಾಜದ ಮುನ್ನಲೆಗೆ ಬರಬೇಕು ಎನ್ನುವ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಪ್ರಾರಂಭ ಮಾಡಿ ಪ್ರತಿ ವರ್ಷ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ ವೆಲ್ ಕೊರೆಸಲಾಗುತ್ತಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಕೃಷಿಯನ್ನೇ ನಂಬಿರುವ ಶೇಕಡ ೭೦ ಜನರು ಇದ್ದಾರೆ. ದೇಶದ ರೈತ ಕೃಷಿಕ, ಅವರ ಬದುಕನ್ನು ಹಸನಗೊಳಿಸಲು ಸರ್ಕಾರಗಳು ಅವರ ಉದ್ಧಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ನಮ್ಮ ನೆಚ್ಚಿನ ಸಿಎಂ ಸಿದ್ದರಾಮಯ್ಯ ಅವರು ದೇವರಾಜ ಅರಸು ನಂತರ ಮತ್ತೊಮ್ಮೆ ಹಿಂದುಳಿದ ವರ್ಗಗಳ ಬಡವರ ಪ್ರೀತಿಯ ನಾಯಕ ಎಂದು ಹೇಳಿದರು.
ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಸಲು ಕಳೆದ ವರ್ಷ ೨೦ ಪಲಾನುಭವಿಗಳಿಗೆ ಸವಲತ್ತು ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ಬಳಿ ಹಾಗೂ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಹೊಲದಲ್ಲಿ ಬೋರ್ ವೆಲ್ ಕೊರೆಸಲು ನಿಗಧಿ ಪಡಿಸಿದ ಗುರಿಯನ್ನು ಹೆಚ್ಚಿಸಲಾಗಿದೆ. ಬೋರ್ ವೆಲ್ನಲ್ಲಿ ಉತ್ತಮ ನೀರು ಬಂದು ನಿಮ್ಮ ಬೆಳೆಗಳಿಗೆ ಉತ್ತಮ ನೀರಾದರೆ ಅದರಿಂದ ಆರ್ಥಿಕವಾಗಿ ಮುಂದೆ ಬರಬಹುದು, ಆರ್ಥಿಕವಾಗಿ ಸದೃಢರಾದರೆ ಮಕ್ಕಳಿಗೆ ಶಿಕ್ಷಣ ನೀಡಬಹುದು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣ, ಇವರಿಬ್ಬರ ವಿಚಾರಧಾರೆಗಳನ್ನು ಮುಖ್ಯಮಂತ್ರಿ ಸಿದ್ರಾಮಯ್ಯನವರು ತಮ್ಮ ಆಡಳಿತದಲ್ಲಿ ಜೋಡಿಸಿಕೊಂಡಿದ್ದಾರೆ. ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಅವರು, ಒಂದು ಜಾತಿ, ಒಂದು ಧರ್ಮ ಅಲ್ಲ, ಬಡವರ ಪರ ಇರುವ ಏಕೈಕ ಮುಖ್ಯಮಂತ್ರಿ ಎಂದು ಹೇಳಿದರು.
ಫಲಾನುಭವಿಗಳು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ೪೯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಪ್ರತಿ ಘಟಕದ ವೆಚ್ಚ
೩.೨೪ ಲಕ್ಷ ರೂ.ಗಳಂತೆ ಒಟ್ಟು ೧೫೯.೨೫ ಲಕ್ಷ, ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಗೊಂಡ ೨೯ ಜನರಿಗೆ ಮಂಜೂರಾತಿ ಪತ್ರ ವಿತರಣೆ.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಟಿ. ರಾಕೇಶ್ ಉಪಸ್ಥಿತರಿದ್ದರು.
Children should be educated and their lives should be made better.
Leave a comment