ಚಿಕ್ಕಮಗಳೂರು: ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು, ಉದ್ಯೋಗವಾಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಲು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಇಎಲ್ಐ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತ ಅಶ್ವಿನ್ರಾಜ್ ಈ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಉದ್ಯೋಗಿಗಳು ಒಂದು ತಿಂಗಳ ವೇತನವನ್ನು ೧೫ ಸಾವಿರ ರೂವರೆಗೆ ಪಡೆಯುತ್ತಾರೆ, ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಒಂದು ಅವಧಿಯಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನಗಳನ್ನು ನೀಡಲಾಗುವುದು ಎಂದರು.
೨೦೨೫ ರ ಆಗಸ್ಟ್ ೧ ರಿಂದ ೨೦೨೭ ರ ಜುಲೈ ೩೧ ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯವಾಗಲಿದ್ದು, ಇದು ಈ ಯೋಜನೆಯ ಪ್ರಯೋಜನಗಳಾಗಿದೆ ಎಂದು ತಿಳಿಸಿದರು. ಈ ಯೋಜನೆಯು ಎರಡು ಭಾಗಗನ್ನೊಳಗೊಂಡಿದ್ದು, ಭಾಗ-ಎ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಕೇಂದ್ರೀಕೃತವಾಗಿದೆ. ಭಾಗ-ಬಿ ಉದ್ಯೋಗದಾತರ ಮೇಲೆ ಕೇಂದ್ರೀಕೃತವಾಗಿದೆ ಎಂದು ವಿವರಿಸಿದರು.
ಮೊದಲ ಬಾರಿಗೆ ಭಾಗ-ಎ ನಲ್ಲಿ ನೇಮಕಗೊಂಡ ಉದ್ಯೋಗಿಗಳಿಗೆ ಇಪಿಎಫ್ಓ ದಲ್ಲಿ ನೊಂದಾಯಿಸಿಕೊಂಡ ಉದ್ಯೋಗಿಗಳಿಗೆ ಪ್ರೋತ್ಸಾಹಧನ ಎರಡು ಕಂತುಗಳಲ್ಲಿ ೧೫ ಸಾವಿರ ರೂಗಳವರೆಗಿನ ಒಂದು ತಿಂಗಳ ಇಪಿಎಫ್ ವೇತನವನ್ನು ನೀಡಲಾಗುವುದೆಂದು ಹೇಳಿದರು.
ಉದ್ಯೋಗಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಬಳಿಕ ಎರಡನೇ ಕಂತನ್ನು ಪಾವತಿಸಲಾಗುವುದು, ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಲು ಪ್ರೋತ್ಸಾಹದ ಒಂದು ಭಾಗವನ್ನು ಠೇವಣಿ ಖಾತೆಯ ಉಳಿತಾಯ ಸಾಧನದಲ್ಲಿ ನಿಗಧಿತ ಅವಧಿಗೆ ಇಡಲಾಗುವುದು. ನಂತರದ ದಿನಾಂಕದಂದು ಉದ್ಯೋಗಿ ಅದನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಭಾಗ-ಬಿ ಉದ್ಯೋಗದಾತರಿಗೆ ಬೆಂಬಲ ನೀಡುವ ಸಲುವಾಗಿ ಕನಿಷ್ಠ ೬ ತಿಂಗಳ ಕಾಲ ನಿರಂತರ ಉದ್ಯೋಗ ಹೊಂದಿರುವವರಿಗೆ ಕೇಂದ್ರ ಸರ್ಕಾರ ಎರಡು ವರ್ಷಗಳವರೆಗೆ ೩ ಸಾವಿರ ರೂ ಪ್ರೋತ್ಸಾಹಧನ ನೀಡುತ್ತದೆ. ಉತ್ಪಾದನಾ ವಲಯಕ್ಕೂ ಪ್ರೋತ್ಸಾಹಧನ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
೨.೬೦ ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಜೊತೆಗೆ ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆ ಇದ್ದು, ಉದ್ಯೋಗಿಗಳು ಮತ್ತು ಉದ್ಯೋಗದಾತರು ಈ ಯೋಜನೆಯ ಸದುಪಯೋಗ ಪಡೆಯಬೇಕಾಗಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾದೇಶಿಕ ಕಚೇರಿ ಲೆಕ್ಕಾಧಿಕಾರಿ ಭರತ್, ಸಿಬ್ಬಂದಿ ಮಧುರನಾಥ್.ಎಸ್ ಉಪಸ್ಥಿತರಿದ್ದರು.
Central government approves increase in social security for employers
Leave a comment