ಚಿಕ್ಕಮಗಳೂರು : ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯಾಗಿದೆ ಎಂದು ಅವರು ಆರೋಪಿಸಿದರು. ನೀರು, ಕಸ ನಿರ್ವಹಣೆ, ಸ್ಟಾಂಪ್ ಪೇಪರ್ ಹಾಗೂ ಸ್ಟಾಂಪ್ ಡ್ಯೂಟಿ ದರಗಳು ಹೆಚ್ಚಳವಾಗಿದ್ದು, ಜನನ–ಮರಣ ಪ್ರಮಾಣಪತ್ರಗಳಿಗೂ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ ಅಡುಗೆ ಎಣ್ಣೆ, ಕುಡಿಯುವ ಎಣ್ಣೆ ದರ ಏರಿಕೆಯ ಜೊತೆಗೆ ರೈತರ ಪಹಣಿ ದರ ಹಾಗೂ ಪಂಪ್ಸೆಟ್ ಟಿಸಿ ದರವೂ ಹೆಚ್ಚಿಸಲಾಗಿದೆ ಎಂದು ಟೀಕಿಸಿದರು. 20 ರೂಪಾಯಿ ಸ್ಟಾಂಪ್ ಪೇಪರ್ ಕೂಡ ಈಗ ದುಬಾರಿಯಾಗಿದ್ದು, ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವ ಸಂದರ್ಭದಲ್ಲೂ 0.5% ಸ್ಟಾಂಪ್ ಡ್ಯೂಟಿ ವಿಧಿಸಲಾಗುತ್ತಿದೆ ಎಂದು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲೂ ಪದೇ ಪದೇ ಸೆಸ್ ವಿಧಿಸಲಾಗುತ್ತಿದೆ. ಇದೀಗ ವಿದ್ಯುತ್ ಹಾಗೂ ಬಸ್ ದರ ಏರಿಕೆಯ ಮೂಲಕ ಜನರಿಗೆ ಮತ್ತಷ್ಟು ಭಾರ ಹಾಕಲಾಗಿದೆ ಎಂದು ಆರೋಪಿಸಿದರು.
“ಗಾಳಿಯನ್ನು ಬಿಟ್ಟು ಉಳಿದ ಎಲ್ಲದರ ಮೇಲೂ ತೆರಿಗೆ ಹಾಕಲಾಗಿದೆ. ಗಾಳಿಗೂ ತೆರಿಗೆ ಹಾಕಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.
“ಆಡು ಮುಟ್ಟದ ಸೊಪ್ಪಿಲ್ಲ, ಗಾಳಿಯನ್ನು ಬಿಡದ ಕಾಂಗ್ರೆಸ್ ಎನ್ನುವ ಜಾಗತಿಕ ದಾಖಲೆ ಸೃಷ್ಟಿಯಾಗಬಹುದು. ಜಗತ್ತಿನಲ್ಲಿ ಸರ್ವಾಧಿಕಾರಿಗಳೂ ಗಾಳಿಗೆ ತೆರಿಗೆ ಹಾಕಿಲ್ಲ” ಎಂದು ತೀವ್ರವಾಗಿ ಟೀಕಿಸಿದರು.
C.T. Ravi strongly criticizes the increase in electricity prices
Leave a comment