ಚಿಕ್ಕಮಗಳೂರು: ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಬರೋಬ್ಬರಿ ಎಂಟು ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ನ್ನು ಕಿತ್ತುಕೊಂಡು ಇನ್ನೋವಾ ಕಾರಿನಲ್ಲಿ ಪರಾರಿಯಾಗಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದ ನಿವಾಸಿ ರವಿಕುಮಾರ್ ಶೆಟ್ಟಿ ಹಾಗೂ ಅವರ ಸ್ನೇಹಿತರಾದ ನಾಗೇಶ್, ಹರ್ಷ ಶೆಟ್ಟಿ ಮತ್ತು ಸುಧಾಕರ್ ಚಾರ್ಯ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಿಕ್ಕಮಗಳೂರು ತಾಲೂಕಿನ ಕೈಮರ ಸರ್ಕಲ್ ಸಮೀಪ ಮೂತ್ರ ವಿಸರ್ಜನೆಗಾಗಿ ಗಾಡಿ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ.
ಈ ವೇಳೆ ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ (ನಂಬರ್ KA56M7886) ಬಂದ ಅಪರಿಚಿತ ಚಾಲಕನು ವಿಳಾಸ ಕೇಳಿದ್ದಾನೆ. ಸುಧಾಕರ್ ಅವರು ವಿಳಾಸ ಹೇಳುತ್ತಿದ್ದಾಗ, ಚಾಲಕನು ತಕ್ಷಣವೇ ಅವರ ಬಳಿ ಇದ್ದ ಎಂಟು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದ್ದ ಬ್ಯಾಗ್ನ್ನು ಬಲವಂತವಾಗಿ ಕಿತ್ತುಕೊಂಡು ಕಾರಿನೊಂದಿಗೆ ಸ್ಥಳದಿಂದ ವೇಗವಾಗಿ ಪರಾರಿಯಾಗಿದ್ದಾನೆ.
ಸಂತ್ರಸ್ತ ರವಿಕುಮಾರ್ ಶೆಟ್ಟಿ ಅವರು ನೀಡಿದ ದೂರಿನನ್ವಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Bag containing Rs 8 lakh stolen on pretext of asking for address
Leave a comment