ಚಿಕ್ಕಮಗಳೂರು: ರಾಜ್ಯಸರ್ಕಾರ ರೈತರ ಬೇಡಿಕೆಗನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡುವಲ್ಲಿ ವಿಫಲವಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸದಲ್ಲಿ ತೊಡಗಿ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸರ್ಕಾರ ವಲಯವಾರು ಅವಶ್ಯಕತೆ ಪ್ರಮಾಣವನ್ನು ಅಂದಾಜಿಸಿ ಮುಂಗಾರಿಗೂ ಮೊದಲೇ ಪತ್ರ ಮುಖೇನ ಕೇಂದ್ರಕ್ಕೆ ತಿಳಿಸಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಕಳೆದ ತಿಂಗಳು ಪತ್ರ ಬರೆದು ಯೂರಿಯಾ ರಸಗೊಬ್ಬರವು ೬.೩೦ ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಆದರೆ ಕೇಂದ್ರ ಸರ್ಕಾರ ೮.೭೩ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಹೆಚ್ಚಿಗೆ ನೀಡಿದ್ದು, ಉಳಿದ ೨.೪೩ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಕಾಳಸಂತೆಕೋರರಿಗೆ ಮಾರಾಟ ಮಾಡುವ ಹುನ್ನಾರದಿಂದ ರಸಗೊಬ್ಬರ ಅಭಾವವನ್ನು ಸೃಷ್ಟಿಮಾಡಿ, ಕಣ್ಣು ಕಿವಿ ಇಲ್ಲದ ಸರ್ಕಾರವಾಗಿದೆ ಎಂದು ದೂರಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಕ್ಕೆ ತರಲಾಗಿದ್ದ ರೈತರ ಮಕ್ಕಳ ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ‘ರೈತ ವಿದ್ಯಾನಿಧಿ’, ರಾಜ್ಯದ ೫೨ ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯಿಂದ ಪ್ರತೀ ರೈತರಿಗೆ ೪ ಸಾವಿರ ರೂ ನಿಲ್ಲಿಸಲಾಗಿದೆ ಎಂದು ಲೇವಡಿ ಮಾಡಿದರು.
ರೈತರ ಕೃಷಿ ಪಂಪ್ಸೆಟ್ಗೆ ಟ್ರಾನ್ಸ್ಫಾರ್ಮರ್ ಅಳವಡಿಸಲು ೨೫ ಸಾವಿರ ರೂ ನಿಗಧಿಪಡಿಸಲಾಗಿದ್ದು, ಇಂದಿನ ಕಾಂಗ್ರೆಸ್ ಸರ್ಕಾರ ೩ ಲಕ್ಷ ರೂ ನೀಡಬೇಕು ಇದರ ಜೊತೆಗೆ ಒಂದು ಕಂಬಕ್ಕೆ ೨೫ ಸಾವಿರ ರೂನಂತೆ ಹೆಚ್ಚುವರಿ ಹಣ ನೀಡಬೇಕಾಗಿದೆ ಎಂದ ಅವರು, ಮನೆಯ ವಿದ್ಯುತ್ ಬಿಲ್ನಲ್ಲಿ ಪ್ರತೀ ಯೂನಿಟ್ಗೆ ೩೩ ಪೈಸೆಯಂತೆ ಇಪಿಪಿಸಿಎ ದರ ಹೊಸದಾಗಿ ಸೇರಿಸಲಾಗಿದೆ. ಮೊದಲಿದ್ದ ಸ್ಲಾಬ್ ಪದ್ದತಿಯನ್ನು ರದ್ದುಮಾಡಿ ಪ್ರತೀ ಯೂನಿಟ್ಗೆ ೫.೭೮ ರೂ ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಬಿತ್ತನೆ ಬೀಜದ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ ಶೇ.೨೮ ರಷ್ಟನ್ನು ಏರಿಸಲಾಗಿದೆ. ಬರ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ನೀಡಿದ ೩೪೫೪ ಕೋಟಿ ರೂ ಅನುದಾನದಲ್ಲಿ ನಯಾಪೈಸೆಯನ್ನು ರಾಜ್ಯದ ರೈತರಿಗೆ ನೀಡದೆ ವಂಚಿಸಿದ್ದಾರೆಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದ ಅವಧಿಯಲ್ಲಿ ೩೪೦೦ ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ ೧೦ ಸಾವಿರ ರೂ ನೀಡುವ ಪ್ರೋತ್ಸಾಹ ಧನವನ್ನು ನಿಲ್ಲಿಸಲಾಗಿದೆ ಎಂದರು.
ಹಾವೇರಿ ಮತ್ತು ರಾಣಿಬೆನ್ನೂರಿನಲ್ಲಿ ರಸಗೊಬ್ಬರ ಖರೀದಿಸಲು ಮುಂದಾಗಿದ್ದ ರೈತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿದ ಅವರು, ಹಾಲಿನ ಪ್ರೋತ್ಸಾಹಧನವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದಾರೆಂದು ತಿಳಿಸಿದರು.
ಜಿಲ್ಲೆಯಲ್ಲಿ ತರಕಾರಿ ಬೆಳೆಗಾರರಿಗೆ ಪೂರ್ವ ಮುಂಗಾರು ಮಳೆಯಿಂದ ಹಾನಿಯಾಗಿರುವ ನಷ್ಟದ ಮೊತ್ತವನ್ನು ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಅವರು, ಕಾಡಾನೆ ಹಾವಳಿಯಿಂದ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಈ ಬಗ್ಗೆ ಹೋರಾಟ ಮಾಡಿದರೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ಮೃತ ಕುಟುಂಬಗಳಿಗೆ ಕೂಡಲೇ ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೀತಾರಾಂಭರಣ್ಯ, ದಿನೇಶ್ ಕೋಟೆ, ಸಚಿನ್ಗೌಡ, ಪಾದಮನೆ ದಿನೇಶ್, ಕೇಶವ್ ಮತ್ತಿತರರು ಉಪಸ್ಥಿತರಿದ್ದರು.
Anti-farmer government that does not stock fertilizer
Leave a comment