ಚಿಕ್ಕಮಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿರುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷ ತ್ರಿಭುವನ್ ಎತ್ತಿನಮನೆ ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಕೈಬಿಟ್ಟರೆ ರಾಜ್ಯದಲ್ಲಿ ಅಹಿಂದ ವರ್ಗದ ಜನರ ಮನಸ್ಸಿಗೆ ಅತೀವ ನೋವುಂಟಾಗಲಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ಶಕ್ತಿ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನಡೆಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಸಿದ್ದರಾಮಯ್ಯ ಪರವಾಗಿ ಅಹಿಂದ ಸಂಘಟನೆ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ. ಅಹಿಂದ ಸಮುದಾಯಗಳು ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದರು.
ಅಹಿಂದ ಸಂಘಟನೆ ಮುಖಂಡ ದಂಟರಮಕ್ಕಿ ಪುಟ್ಟೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯದ ಉದ್ದಗಲಕ್ಕೂ ಕೆಲಸ ಮಾಡುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಬೇರೆ ಪಕ್ಷದವರು ಅನುಸರಿಸಿದ್ದಾರೆ. ಯಾವುದೇ ಕಳಂಕವಿಲ್ಲದೆ ಪಾರದರ್ಶಕ ಆಡಳಿತ ನಡೆಸಿದವರು ಸಿದ್ದರಾಮಯ್ಯ ಎಂದು ಹೇಳಿದರು.
ಅಹಿಂದ ಸಂಘಟನೆ ಕಾರ್ಯಾಧ್ಯಕ್ಷ ರಸೂಲ್ ಖಾನ್, ಮುಖಂಡರಾದ ಪ್ರಕಾಶ್ ರೈ ಕೆಂಪನಹಳ್ಳಿ, ಸುರೇಶ್ ಹಿರೇಮಗಳೂರು, ಸಿ.ಸಿ. ಮಧು, ಜಗದೀಶ್ ಕೋಟೆ ಭಾಗವಹಿಸಿದ್ದರು.
Ahinda organization protests across the state in favor of Siddaramaiah
Leave a comment