ಅಜ್ಜಂಪುರ: ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನ ಲಾಕರ್ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಸೇರಿದಂತೆ ಒಟ್ಟು ₹1.39 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿನಗೆರೆ ಗ್ರಾಮದಲ್ಲಿ ನಡೆದಿದೆ.
ಕಾಟಿನಗೆರೆ ಗ್ರಾಮದ ಶಶಿಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ದೂರಿನ ಪ್ರಕಾರ, ಆಗಸ್ಟ್ 18ರಂದು ರಾತ್ರಿ 9 ಗಂಟೆ ಸುಮಾರಿಗೆ ಅತ್ತಿಮೊಗ್ಗೆ ಗ್ರಾಮದ ಸಂಬಂಧಿಕರಾದ ಶಾಂತಮೂರ್ತಿ ಮೃತಪಟ್ಟಿರುವ ವಿಷಯ ಶಶಿಕುಮಾರ್ ಅವರಿಗೆ ತಿಳಿದುಬಂದಿದೆ. ಹೀಗಾಗಿ ರಾತ್ರಿ ಸುಮಾರು 10 ಗಂಟೆಗೆ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು, ತಮ್ಮ ತಾಯಿ ರೇಣುಕಮ್ಮ ಅವರನ್ನು ಬೈಕ್ನಲ್ಲಿ ದೊಡ್ಡಮ್ಮ ಇಂದ್ರಮ್ಮ ಅವರ ಮನೆಗೆ ಕರೆದೊಯ್ದು ಬಿಟ್ಟು ಅತ್ತಿಮೊಗ್ಗೆಗೆ ತೆರಳಿದ್ದರು.
ಆಗಸ್ಟ್ 19ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಕಾಟಿನಗೆರೆಗೆ ಹಿಂದಿರುಗಿ ತಾಯಿಯನ್ನು ಕರೆದುಕೊಂಡು ಮನೆಗೆ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ನಡುಮನೆಯಲ್ಲಿದ್ದ ಬೀರುವಿನ ಲಾಕರ್ನ್ನು ಯಾವುದೋ ಆಯುಧದಿಂದ ಮೀಟಿ ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಕಳ್ಳತನವಾಗಿರುವ ವಸ್ತುಗಳಲ್ಲಿ ಸುಮಾರು 30 ಗ್ರಾಂ ತೂಕದ ಚಿನ್ನದ ಸರ, ಅಂದಾಜು ₹1.20 ಲಕ್ಷ ಮೌಲ್ಯದ ಚಿನ್ನಾಭರಣ, 10 ಗ್ರಾಂ ತೂಕದ ಎರಡು ಬೆಳ್ಳಿ ದೀಪಗಳು, ₹5 ಸಾವಿರ ಮೌಲ್ಯದ ಎರಡು ಬೆಳ್ಳಿ ಉಂಗುರಗಳು ಹಾಗೂ ₹12 ಸಾವಿರ ನಗದು ಸೇರಿವೆ. ಒಟ್ಟು ₹1.39 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಗಸ್ಟ್ 18ರ ರಾತ್ರಿ 10 ಗಂಟೆಯಿಂದ ಆಗಸ್ಟ್ 19ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ. 220/2026ರಂತೆ ಪ್ರಕರಣ ದಾಖಲಿಸಿಕೊಂಡು, ಕಳ್ಳರು ಹಾಗೂ ಕಳವಾದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
Gold jewellery worth ₹1.39 lakh stolen
Leave a comment