ಕೊಪ್ಪ: ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೊಪ್ಪ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ನಾಲ್ಕು ಜಾನುವಾರುಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಮಿನಿ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆ.10ರಂದು ಬೆಳಿಗ್ಗೆ ಕೊಪ್ಪ ಠಾಣೆ ಪೊಲೀಸರು ವಿಶೇಷ ಗಸ್ತಿನಲ್ಲಿದ್ದ ವೇಳೆ, ಎನ್.ಆರ್.ಪುರ ಕಡೆಯಿಂದ ಮಿನಿ ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಳಗಡಿ ಫೈರಿಂಗ್ ರೇಂಜ್ ಬಳಿ KA-36-C-0100 ನೋಂದಣಿ ಸಂಖ್ಯೆಯ ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಿನಿ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.
ವಾಹನದಲ್ಲಿ ಎರಡು ಹೆಣ್ಣು ದನಗಳು ಹಾಗೂ ಎರಡು ಗಂಡು ದನಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನದಲ್ಲಿದ್ದ ಎನ್.ಆರ್.ಪುರ ತಾಲ್ಲೂಕಿನ ಕಡುಹಿನಬೈಲು ಗ್ರಾಮದ ಬದ್ರುದ್ದೀನ್ ಬಿನ್ ಅಹಮ್ಮದ್ ಬ್ಯಾರಿ (35) ಹಾಗೂ ಹನೀಫ್.ಐ ಬಿನ್ ಇಬ್ರಾಹಿಂ (35) ಅವರನ್ನು ವಿಚಾರಿಸಿದಾಗ, ಜಾನುವಾರುಗಳನ್ನು ಶೃಂಗೇರಿ ತಾಲ್ಲೂಕಿನ ಕುಂಚೇಬೈಲು ಗ್ರಾಮದ ಉಮೇಶ್ ಎಂಬುವವರಿಂದ ಖರೀದಿಸಿ ಶೆಟ್ಟಿಕೊಪ್ಪಕ್ಕೆ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಜಾನುವಾರುಗಳ ಸಾಗಾಟಕ್ಕೆ ಯಾವುದೇ ಪರವಾನಗಿ ಇಲ್ಲದಿರುವುದು ಹಾಗೂ ಅವುಗಳನ್ನು ಯಾವ ಉದ್ದೇಶಕ್ಕಾಗಿ ಕೊಂಡೊಯ್ಯಲಾಗುತ್ತಿದೆ ಎಂಬುದಕ್ಕೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ಹಾಗೂ ವಾಹನ ಮತ್ತು ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
Violent transportation of cattle tied with ropes
Leave a comment