ಮೂಡಿಗೆರೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಸಮರ್ಥಿಸುವ ಭರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮುಲ್ಲಾಗಳ ಎದೆ ಸೀಳಿದರೆ ಮೂರಕ್ಷರವಿಲ್ಲ ಎಂದು ಮುಸ್ಲಿಂ ಜನಾಂಗಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಬಂಧಿಸಿಲ್ಲ. ಇನ್ನೆರಡು ದಿನದಲ್ಲಿ ಬಂಧಿಸದಿದ್ದರೆ ಜಿಲ್ಲಾ ಬಂದ್ಗೆ ಕರೆ ನೀಡಲಾಗುವುದು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಝಾಕೀರ್ ಹುಸೇನ್ ಹೇಳಿದರು.
ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿ ‘ಸಿ.ಟಿ.ರವಿ ಅವರ ಊರಿನ ಅವೆಜ್ ಅಹಮದ್ ಅವರು ಬಾಹ್ಯಾಕಾಶ ವಿಜ್ಞಾನಿಯಾಗಿ ದೇಶಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ಈ ಮುಸ್ಲಿಂ ವಿಜ್ಞಾನಿಯನ್ನು ಸಿ.ಟಿ.ರವಿ ಸ್ವತಃ ಸನ್ಮಾನಿಸಿದ್ದಾರೆ. ಮುಸ್ಲಿಮರಿಗೆ ಅಕ್ಷರ ಜ್ಞಾನವಿಲ್ಲ ಎಂದು ಹೇಳಿಕೆ ನೀಡಿರುವ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿ.ಟಿ.ರವಿ ಅವರಿಗೆ ಸರಿಯಾದ ಶಿಕ್ಷಣವಿಲ್ಲ. ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರನ್ನು ಮೆಚ್ಚಿಸುವ ಸಲುವಾಗಿ ಮುಸ್ಲಿಂ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ. ಅವರನ್ನು ಕೂಡಲೆ ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಬಹುಜನ ಸಮಾಜ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಎಲ್.ಬಿ.ರಮೇಶ್ ಮಾತನಾಡಿ, ‘ಸಿ.ಟಿ.ರವಿ ಅವರು ಪದೇ ಪದೇ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿ ಕೋಮು ಗಲಭೆಗೆ ಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಹತಾಶರಾಗಿ ಹಲವಾರು ಬಾರಿ ಗಲಭೆ ಸೃಷ್ಟಿಸುವ ಸಂಚು ರೂಪಿಸಿದ್ದಾರೆ. ಸಿ.ಟಿ.ರವಿ ಮತ್ತವರ ಬೆಂಬಲಿಗರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎ.ಸಿ.ಅಯೂಬ್ ಹಾಜಿ, ಬಿ.ಎಚ್.ಮಹಮ್ಮದ್, ಎ.ಎಂ.ಶರೀಫ್, ಅಬ್ರಾರ್ ಅಹಮದ್, ಇಸಾಕ್ ಭೂತನಕಾಡು, ಮೌಲಾನಾ ಶಫಿವುಲ್ಲಾ, ವಾಜಿದ್ ಹುಸೇನ್, ಫಾರೂಕ್, ಫಿಶ್ ಮೋಣು, ಝಾಕೀರ್ ಅಲಿ ಖಾನ್, ಪಿ.ಕೆ. ಹಮೀದ್, ಖಾಲಿದ್, ಸಿ.ಕೆ.ಇಬ್ರಾಹಿಂ ಹಾಜಿ, ಶಬ್ಬಿರ್ ಅಹಮದ್ ಬೇಗ್, ಜೆ.ಬಿ.ಅಲಿ ಹಾಜಿ, ಜೋಹರ್ ಬಿದರಹಳ್ಳಿ, ನಾಸಿರ್ ಬಿಳಗುಳ, ಬಿಎಸ್ಪಿಯ ಅಭಿಜಿತ್ ಹೆಡೆದಾಳು ಇದ್ದರು.
District bandh if C.T. Ravi is not arrested in the next two days
Leave a comment