ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ರೈತರ ಪರಿಸ್ಥಿತಿಯನ್ನು ಪರಿಶೀಲಿಸಲು ಜುಲೈ 17ರಿಂದ ಹೋಬಳಿವಾರು ಅಧ್ಯಯನ ಪ್ರವಾಸ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ, ಕಂದಾಯ, ಪಶುಸಂಗೋಪನೆ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಯಿಂದ ಪಡೆದ ಮಾಹಿತಿಯಂತೆ ಸಿಂಗಟಗೆರೆ ಮತ್ತು ಪಂಚನಹಳ್ಳಿ ಹೋಬಳಿಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ ಎಂದು ಹೇಳಿದರು.
ಮುಂದಿನ 10ರಿಂದ 15 ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿರುವ ರಾಗಿ ಬೆಳೆಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯ ಕುರಿತು ಸರ್ಕಾರ ವರದಿ ಸಂಗ್ರಹಿಸುತ್ತಿದೆ. ಇದೇ ರೀತಿಯಾಗಿ ಜೆಡಿಎಸ್ ಪಕ್ಷವೂ ಕಂದಾಯ ವಿಭಾಗವಾರು ಉಸ್ತುವಾರಿಗಳನ್ನು ನೇಮಿಸಿದ್ದು, ಕಡೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ತಮಗೆ ಜವಾಬ್ದಾರಿ ನೀಡಲಾಗಿದೆ. ಅಧ್ಯಯನ ಪ್ರವಾಸದ ಬಳಿಕ ಪಕ್ಷಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಡೂರು ವಿಧಾನಸಭಾ ಕ್ಷೇತ್ರದ 49 ಗ್ರಾಮ ಪಂಚಾಯಿತಿಗಳ ಪೈಕಿ ಬಂಜೇನಹಳ್ಳಿ, ಮಚ್ಚೇರಿ ಹಾಗೂ ಕೆ.ಬಿದರೆ ಗ್ರಾಮಗಳಲ್ಲಿ ಈಗಾಗಲೇ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಆಗದಿದ್ದರೆ 49 ಗ್ರಾಮ ಪಂಚಾಯಿತಿಗಳ ಸುಮಾರು 400 ಹಳ್ಳಿಗಳಲ್ಲಿ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಬೀರೂರು ಹೋಬಳಿಯ ದೊಡ್ಡಘಟ್ಟ, ಕಾರೇಹಳ್ಳಿ, ಜೋಡಿತಿಮ್ಮಾಪುರ, ಗಾಳಿಹಳ್ಳಿ ಹಾಗೂ ಬ್ಯಾಗಡೆಹಳ್ಳಿಯಿಂದ ದೊಡ್ಡಪಟ್ಟಣಗೆರೆವರೆಗೆ ತಮ್ಮ ಶಾಸಕತ್ವದ ಅವಧಿಯಲ್ಲಿ ಅಳವಡಿಸಿದ್ದ ಭದ್ರಾ ಕುಡಿಯುವ ನೀರಿನ ಪೈಪ್ಲೈನ್ಗಳು ಬೈಪಾಸ್ ಕಾಮಗಾರಿಯಿಂದ ಹಾನಿಗೊಳಗಾಗಿವೆ. ಕಡೂರು ತಾಲ್ಲೂಕಿನ 20 ಹಾಗೂ ತರೀಕೆರೆ ತಾಲ್ಲೂಕಿನ 14 ಗ್ರಾಮಗಳಿಗೆ ನೀರು ಪೂರೈಸುವ ಒಪ್ಪಂದ ಜಾರಿಯಾಗಿಲ್ಲ. ಹಾನಿಗೊಂಡ ಪೈಪ್ಲೈನ್ಗಳನ್ನು ದುರಸ್ತಿ ಮಾಡುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿಯಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಡೂರಿಗೆ ಬರ ಹೊಸದೇನಲ್ಲ. ಆದರೆ, ಈ ಬಾರಿಯ ಪರಿಸ್ಥಿತಿ ಗಂಭೀರವಾಗಿದೆ. ರಾಜಕೀಯ ಭೇದ ಮರೆತು ಜನರ ಸಂಕಷ್ಟಗಳಿಗೆ ಎಲ್ಲರೂ ಸ್ಪಂದಿಸಬೇಕು. ಶಾಸಕರು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದು, ನಮ್ಮ ಸಹಕಾರವೂ ಇರುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬರ ಘೋಷಣೆಗೆ ಕೇಂದ್ರದ ಮಾನದಂಡಗಳನ್ನು ಅನುಸರಿಸುತ್ತಿದೆ. ತಾಲ್ಲೂಕಿನ ಸರಾಸರಿ ಮಳೆಯ ಬದಲಿಗೆ ಹೋಬಳಿವಾರು ಪರಿಸ್ಥಿತಿಯನ್ನು ಪರಿಗಣಿಸಿ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಆದರೂ ಜುಲೈ 25ರವರೆಗೆ ಉತ್ತಮ ಮಳೆಗಾಲದ ನಿರೀಕ್ಷೆ ಇಟ್ಟುಕೊಳ್ಳೋಣ. ಸಮರ್ಪಕ ಮಳೆಯಾಗಿ ರೈತರ ಸಂಕಷ್ಟ ನಿವಾರಣೆಯಾಗಲಿ ಎಂಬ ಆಶಯವಿದ್ದರೂ, ಎದುರಾಗಬಹುದಾದ ಪರಿಸ್ಥಿತಿಗೆ ಈಗಿನಿಂದಲೇ ಸಿದ್ಧರಾಗಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಟಿ. ಗಂಗಾಧರ ನಾಯ್ಕ, ಫಾಲಾಕ್ಷಪ್ಪ, ಮೋಹನ್ ಕುಮಾರ್, ಗಣೇಶ್, ಕೃಷ್ಣಾನಾಯ್ಕ ಇದ್ದರು.
Fear of rain in Kadur taluk
Leave a comment