ಕಡೂರು: ತಂದೆಯ ನಿಧನದ ಸುದ್ದಿ ಕೇಳಿ ತವರಿಗೆ ಬರುತ್ತಿದ್ದ ನಿವೃತ್ತ ಸೈನಿಕರೊಬ್ಬರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಡೂರು ತಾಲ್ಲೂಕಿನ ಬಂಡಿಕೊಪ್ಪಲು ನಿವಾಸಿ, ನಿವೃತ್ತ ಸೈನಿಕ ನಟೇಶ್ (35) ಮೃತಪಟ್ಟ ದುರ್ದೈವಿ. ಕಂಚುಗಾರನಹಳ್ಳಿಯಲ್ಲಿದ್ದ ಇವರ ತಂದೆ ಚನ್ನಬಸಪ್ಪ ಅವರು ವಯೋಸಹಜ ಕಾಯಿಲೆಯಿಂದ ಮೇ 28 ರಂದು ನಿಧನರಾಗಿದ್ದರು.
ಈ ವಿಷಯ ತಿಳಿದ ನಟೇಶ್ ಅಂದು ಮಧ್ಯಾಹ್ನ ಬಂಡಿಕೊಪ್ಪಲಿನಿಂದ ತಮ್ಮ ಬೈಕ್ ನಲ್ಲಿ (KA 66 L-0910) ಜಿಗಣೇಹಳ್ಳಿ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ನಾಗೇನಹಳ್ಳಿ ಸಮೀಪ ರಸ್ತೆಗೆ ಇದ್ದಕ್ಕಿದ್ದಂತೆ ನಾಯಿಯೊಂದು ಅಡ್ಡ ಬಂದಿದೆ.
ಅದನ್ನು ತಪ್ಪಿಸಲು ಹೋಗಿ ನಟೇಶ್ ಜೋರಾಗಿ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ರಭಸಕ್ಕೆ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಅವರನ್ನು ತಕ್ಷಣ ಚಿಕ್ಕಮಗಳೂರಿನ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೋಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೇ 29 ರಂದು ರಾತ್ರಿ 10 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತರ ಸಹೋದರ ಉಮೇಶ್ ಕೆ.ಸಿ. ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Retired soldier dies after being injured and treatment fails
Leave a comment