ಚಿಕ್ಕಮಗಳೂರು: ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಏಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೇ 2 ರಂದು ಬೆಳಗ್ಗೆ 9ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಅಂಚೆ ಮತ ಪರಿಶೀಲನೆ ಹಾಗೂ ಮರು ಏಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತ ಮರು ಏಣಿಕೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7 ರಿಂ 7.30ರ ಅವಧಿಯಲ್ಲಿ ಸ್ಟ್ರಾಂಗ್ ರೂಂನ ತೆರೆದು ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಂಚೆ ಮತ ಪತ್ರಗಳನ್ನು ಪೊಲೀಸ್ ಭದ್ರತೆ, ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಯಲ್ಲಿ ಮತ ಏಣಿಕಾ ಕೇಂದ್ರಕ್ಕೆ ತರಲಾಗುವುದು. ಬೆಳಗ್ಗೆ 9ಕ್ಕೆ ಮತ ಏಣಿಕೆ ಕಾರ್ಯವನ್ನು ಆರಂಭಿಸಲಾಗುವುದು ಎಂದು ವಿವರಿಸಿದರು.
ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಆಡಳಿತ) ಗೌರವ್ ಕುಮಾರ್ ಶೆಟ್ಟಿ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎಲ್ಲಾ 12 ಅಭ್ಯರ್ಥಿಗಳು ಅಥವಾ ಅಭ್ಯರ್ಥಿಯ ಏಜೆಂಟ್ ಸಮ್ಮುಖದಲ್ಲಿ ಅಂಚೆ ಮತ ಪರಿಶೀಲನೆ ಮತ್ತು ಏಣಿಕೆ ಕಾರ್ಯ ನಡೆಸಲಾಗುವುದು. ಒಟ್ಟು ಎರಡು ಹಂತದಲ್ಲಿ ಅಂಚೆ ಮತ ಪರಿಶೀಲನೆ ಮತ್ತು ಏಣಿಕೆ ಕಾರ್ಯ ನಡೆಸಲಾಗುವುದು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಒಟ್ಟು 1822 ಅಂಚೆ ಮತಪತ್ರ ಬಂದಿವೆ. ಈ ಪೈಕಿ 279 ಅಂಚೆ ಮತ ತಿರಸ್ಕೃತವಾಗಿವೆ. 1543 ಅರ್ಹ ಅಂಚೆ ಮತಪತ್ರ ಪರಿಗಣಿಸಲಾಗಿತ್ತು. ಮೊದಲ ಹಂತದಲ್ಲಿ ತಿರಸ್ಕೃತಗೊಂಡ ಅಂಚೆ ಮತಪತ್ರಗಳನ್ನು ಪುನರ್ ಪರಿಶೀಲನೆ ನಡೆಸಲಾಗುವುದು. ಈ ಪೈಕಿ ಅರ್ಹ ಮತಪತ್ರ ಕಂಡು ಬಂದರೆ ಅವುಗಳನ್ನು ಒಳಗೊಂಡಂತೆ 1543 ಈ ಹಿಂದೆ ಅರ್ಹ ಅಂಚೆ ಮತ ಪತ್ರ ಸೇರಿಸಿಕೊಂಡು ಏಣಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಇಬ್ಬರು ಅಂಚೆ ಮತಪತ್ರ ಏಣಿಕೆ ಸಹಾಯಕರು, ಒಬ್ಬ ಏಣಿಕೆ ಮೇಲ್ವಿಚಾರಕ, ಒಬ್ಬ ಮೈಕ್ರೋ ಅಬ್ಸರ್ವರ್ ಹಾಗೂ ಮತ ಏಣಿಕಾ ಕೇಂದ್ರ ಹಾಗೂ ಸ್ಟ್ರಾಂಗ್ ರೂಂನಿಂದ ಮತಪತ್ರ ಏಣಿಕಾ ಕೇಂದ್ರಕ್ಕೆ ತೆರವುದಕ್ಕೆ ಸೇರಿದಂತೆ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿದೆ.
ಅಂಚೆ ಮತಪತ್ರ ಮರುಪರಿಶೀಲನೆ ಮತ್ತು ಏಣಿಕೆ ಕಾರ್ಯದ ವೀಕ್ಷಣೆಗೆ ಆಗಮಿಸುವ ಅಭ್ಯರ್ಥಿಗಳು ಹಾಗೂ ಏಜೆಂಟ್ಗಳು ಏಣಿಕೆ ಕಾರ್ಯ ಆರಂಭಗೊಂಡ ನಂತರ ಹೊರಗೆ ಹೋಗುವುದಕ್ಕೆ ಅವಕಾಶವಿಲ್ಲ. ಒಂದು ವೇಳೆ ಹೊರಗೆ ಎದು ಹೋದರೆ, ಮತ್ತೆ ಏಣಿಕಾ ಕೇಂದ್ರದ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಎನ್,ಎಂ,ನಾಗರಾಜ್ ಗುರುವಾರ ಸಭೆ ನಡೆಸಿದರು. ಗೆಲುವು ಸಾಧಿಸಿದ ಶಾಸಕ ರಾಜೇಗೌಡ, ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ , ಜೆಡಿಎಸ್ನಿಂದ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.
ಅಂಚೆ ಮತಪತ್ರ ಬಂದ ಲಕೋಟೆಗೆ 13(ಸಿ) ಫಾರಂ ಎನ್ನಲಾಗುತ್ತದೆ. ಈ ಲಕೋಟೆ ಒಳಭಾಗದಲ್ಲಿ ಇರುವ ಮತದಾರರ ದೃಢೀಕರಣ ಪತ್ರಕ್ಕೆ 13(ಬಿ) ಫಾರಂ, ಅಂಚೆ ಮತಪತ್ರಕ್ಕೆ ಫಾರಂ 13(ಎ) ಎಂದು ಕರೆಲಾಗುತ್ತದೆ.
13(ಬಿ) ಫಾರಂ ಕಡ್ಡಾಯವಾಗಿದೆ. ಈ ಫಾರಂ ಇಲ್ಲವಾದರೂ ಅಂಚೆ ಮತ ತಿರಸ್ಕೃತವಾಗಲಿದೆ.
ಇನ್ನೂ ಅಂಚೆ ಮತಪತ್ರದ 13(ಎ) ಪಾರಂನಲ್ಲಿ ಮತದಾರ ಸಹಿ ಮಾಡಿರಬೇಕು ಹಾಗೂ ಗೆಜೆಟೆಡ್ ಅಧಿಕಾರಿ ಸಹಿ ಇದ್ದರೆ ಮಾತ್ರ ಅಂಚೆ ಮತ ಪರಿಗಣಿಸಲಾಗುತ್ತದೆ. ಇಲ್ಲವಾದರೆ, ತಿರಸ್ಕರಿಸಲಾಗುವುದು.
ದೃಢೀಕರಣ ಪತ್ರದ ಕ್ರಮ ಸಂಖ್ಯೆ ಹಾಗೂ ಅಂಚೆ ಮತಪತ್ರದ ಫಾರಂ ಸಂಖ್ಯೆ ಒಂದೇ ಆಗಿರಬೇಕು. ಇಲ್ಲವಾದರೂ ತಿರಸ್ಕರಿಸಲಾಗುವುದು. ಅಂಚೆ ಮತಪತ್ರದಲ್ಲಿ ಒಬ್ಬ ಅಭ್ಯರ್ಥಿಗಿಂತ ಹೆಚ್ಚಿನ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದ್ದರೂ ತಿರಸ್ಕರಿಸಲಾಗುವುದು, ಸ್ಪಷ್ಟವಾಗಿ ಯಾವ ಅಭ್ಯರ್ಥಿಗೆ ಮತ ಚಲಾವಣೆ ಮಾಡಲಾಗಿದೆ ಎಂಬುದು ತಿಳಿಯದ ಪಕ್ಷದಲ್ಲಿಯೂ ಮತಪತ್ರ ತಿರಸ್ಕರಿಸಲಾಗುವುದು ಎಂದು ಗೌರವ್ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
Postal ballot verification and recount in the presence of candidates
Leave a comment