ಚಿಕ್ಕಮಗಳೂರು: ಮರದ ದಾಸ್ತಾನು ಮಾಡಿದ್ದ ಅಂಗಡಿಯೊಂದರಲ್ಲಿ ಬುಧವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮರಮುಟ್ಟುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ರಸ್ತೆಯಲ್ಲಿ ಬುಧವಾರ ರಾತ್ರಿ ಸುಮಾರು ಎರಡು ಗಂಟೆಯ ವೇಳೆಗೆ ಹೊತ್ತಿದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಮಳಿಗೆಯನ್ನು ಆವರಿಸಿಕೊಂಡಿದ್ದು, ಮರದ ಸಾಮಾನುಗಳು ಧಗಧಗನೆ ಹೊತ್ತಿ ಉರಿದಿವೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ವಾಹನಗಳ ಸಹಾಯದೊಂದಿಗೆ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ವಾಹನಗಳಲ್ಲಿದ್ದ ನೀರು ಸಾಕಾಗದೆ ಸಿಬ್ಬಂದಿಗಳು ಮತ್ತೆ ಕಚೇರಿಗೆ ತೆರಳಿ ನೀರು ತುಂಬಿಸಿಕೊಂಡು ಬಂದು ಕಾರ್ಯಾಚರಣೆ ಮುಂದುವರಿಸಬೇಕಾಯಿತು.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಸಾರ್ವಜನಿಕರ ಸತತ ಶ್ರಮದ ಫಲವಾಗಿ ಬೆಳಗಿನ ಜಾವದ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲು ಯಶಸ್ವಿಯಾಗಿದ್ದಾರೆ.
ಈ ಭೀಕರ ಅವಘಡದಲ್ಲಿ ಮಳಿಗೆಯಲ್ಲಿದ್ದ ಬೆಲೆಬಾಳುವ ಮರಗಳು ಹಾಗೂ ತಯಾರಾದ ಪೀಠೋಪಕರಣಗಳು ಸುಟ್ಟು ಕರಕಲಾಗಿದ್ದು, ಮಾಲೀಕರಿಗೆ ಭಾರಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ಹರಡುವುದು ತಪ್ಪಿದ್ದರಿಂದ ದೊಡ್ಡ ಮಟ್ಟದ ದುರಂತವೊಂದು ತಪ್ಪಿದಂತಾಗಿದೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Fire breaks out at wood storage shop
Leave a comment