ಚಿಕ್ಕಮಗಳೂರು : ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಪತ್ತೆಯಾಗಿದ್ದ ಕೇರಳ ಬಾಲಕಿಯ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ಅತ್ಯಂತ ಜಾಗರೂಕತೆಯಿಂದ ನಡೆಯುತ್ತಿದೆ.
ಈ ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಇಬ್ಬರು ತಜ್ಞರಿಂದ ಪರೀಕ್ಷೆ ನಡೆಸುವಂತೆ ವೈದ್ಯಕೀಯ ಮಂಡಳಿಗೆ ವಿಶೇಷ ಮನವಿ ಸಲ್ಲಿಸಿದ್ದರು.
ಸಾಮಾನ್ಯವಾಗಿ ಯಾವುದೇ ಮರಣೋತ್ತರ ಪರೀಕ್ಷೆಯನ್ನು ಒಬ್ಬರೇ ವೈದ್ಯರು ನಿರ್ವಹಿಸುವುದು ರೂಢಿ. ಆದರೆ, ಈ ಪ್ರಕರಣದಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಫಾರೆನ್ಸಿಕ್ ವಿಭಾಗದ ತಜ್ಞ ವೈದ್ಯರಾದ ಡಾ. ಲೋಹಿತ್ ಹಾಗೂ ಡಾ. ಜಯಲಕ್ಷ್ಮಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಇವರಿಬ್ಬರು ಮೃತದೇಹದ ಸಂಪೂರ್ಣ ತಪಾಸಣೆ ನಡೆಸಿ ಮರಣೋತ್ತರ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ವೈದ್ಯಕೀಯ ವಿಧಿವಿಧಾನಗಳು ಮುಗಿದ ಬಳಿಕ ಬಾಲಕಿಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಿಂದ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಕುಟುಂಬಸ್ಥರು ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಕೇರಳಕ್ಕೆ ಕೊಂಡೊಯ್ಯಲಿದ್ದಾರೆ.
ಕಾಫಿನಾಡಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಾಧಾರ ಜಲಪಾತದ ಬಳಿಯಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿಯ ಮೃತದೇಹವನ್ನು ಇಂದು ಪತ್ತೆಹಚ್ಚಲಾಗಿದೆ.
ಸತತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಜಿಲ್ಲಾ ಪೊಲೀಸ್ ತಂಡಕ್ಕೆ ಇಂದು ಮಧ್ಯಾಹ್ನ ಮೃತದೇಹ ದೊರೆತಿದ್ದು, ಸದ್ಯ ಅದನ್ನು ಕಂದಕದಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಬಾಲಕಿಯು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಹೇಳಿದ್ದಾರೆ.
ಕೇರಳದ ಪಾಲಕಾಡ್ ಜಿಲ್ಲೆಯ 14 ವರ್ಷದ ಬಾಲಕಿ ಪ್ರವಾಸಕ್ಕೆಂದು ಇಲ್ಲಿಗೆ ಬಂದಿದ್ದಾಗ ನಾಪತ್ತೆಯಾಗಿದ್ದಳು. ಸದ್ಯ ಮೃತದೇಹದ ಬಗ್ಗೆ ಕೇರಳ ಪೊಲೀಸರಿಗೆ ಹಾಗೂ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
Girl’s body sent to Kerala after postmortem
Leave a comment