ಚಿಕ್ಕಮಗಳೂರು:- ಗುಡ್ ಪ್ರೈಡ್ ದುಃಖದ ದಿನವಾಗಿದ್ದರೂ ಮಾನವನಿಗಾಗಿ ದೇವರು ತನ್ನನ್ನೇ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದ ದಿನವನ್ನ ಗುಡ್ ಪ್ರೈಡೇ ಅಥವಾ ಶುಭ ಶುಕ್ರವಾರ ದಿನವೆಂದು ಕರೆಯಲ್ಪಡುತ್ತದೆ.
ಇಂದು ಜಗತ್ತಿನಾದ್ಯಂತ ಶುಭ ಶುಕ್ರವಾರವನ್ನು ಕ್ರೈಸ್ತ ಭಕ್ತಾಧಿಗಳು ಚರ್ಚ್ಗಳಿಗೆ ಭೇಟಿ ನೀಡಿ ಯೇಸು ಕ್ರಿಸ್ತರು ಶಿಲುಬೆ ಮೇಲೆ ಪ್ರಾಣ ತ್ಯಾಗ ಮಾಡುವ ಮುನ್ನ ೧೪ ಸ್ಥಳಗಳಲ್ಲಿ ನಡೆದ ಘಟನಾವಳಿಯನ್ನು ಸ್ಮರಿಸುತ್ತಾ ಶಿಲುಬೆಯ ಮುಂದೆ ಭಕ್ತಾಧಿಗಳು ಮೊಣಕಾಲು ಊರಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸರತಿಯಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.
೨೦೨೬ ವರ್ಷಗಳ ಹಿಂದೆ ಮನುಕುಲದ ರಕ್ಷಣೆಗಾಗಿ ಅವರ ಪಾಪಗಳನ್ನು ಕ್ಷಮಿಸಲು ಪ್ರಭು ಯೇಸು ಕ್ರಿಸ್ತರು ಮನುಷ್ಯ ರೂಪವನ್ನು ಧರಿಸಿಕೊಂಡು ಭೂಲೋಕದಲ್ಲಿ ಮನುಷ್ಯನಿಗೆ ಮಾನವತ್ವವನ್ನು ಕಲಿಸುತ್ತಾ ಮುಂದೆ ಸಾಗುತ್ತಾ ಮನುಷ್ಯನ ಪಾಪಗಳನ್ನು ಕ್ಷಮಿಸಲು ನಮಗಾಗಿ ತಮ್ಮ ರಕ್ತದಿಂದ ತೊಳೆಯಲು ಕಲ್ವಾರಿ ಶಿಲುಬೆಯ ಮೇಲೆ ಕಷ್ಟ, ಹಿಂಸೆ, ನೋವು ತಾಳಿಕೊಂಡು ಪ್ರಭು ಯೇಸು ಕ್ರಿಸ್ತರು ತಮ್ಮನ್ನೇ ಮಾನವ ಕುಲ ಒಳಿತಿಗಾಗಿ ಶಿಲುಬೆಯಲ್ಲಿ ಸಮರ್ಪಿಸಿಕೊಂಡ ದಿನವನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ.
ಕ್ರೈಸ್ತ ಭಕ್ತಾಧಿಗಳು ೪೦ ದಿನಗಳ ಉಪವಾಸ ಮೂಲಕ ದಾನ ಧರ್ಮದ ಮೂಲಕ ತಮ್ಮ ತಪ್ಪುಗಳಿಗಾಗಿ ಪ್ರಭು ಯೇಸು ಕ್ರೈಸ್ತರಲ್ಲಿ ಕ್ಷಮೆಯಾಚಿಸಿ, ಆತ್ಮ ಪರಿಶೋಧನೆ ಮಾಡಿಕೊಳ್ಳುವಂತ ದಿನವಾಗಿರುತ್ತದೆ.
ಇಂದು ಸಂತ ಜೋಸೆಫರ ಪ್ರಧಾನಾಲಯದಲ್ಲಿ ಬೆಳಿಗಿನಿಂದ ಮದ್ಯಾಹ್ನದವರೆಗೆ ಸರತಿಯಂತೆ ಸಾವಿರಾರು ಭಕ್ತಾಧಿಗಳು ಶಿಲುಬೆ ಮುಂದೆ ಮೊಣಕಾಲು ಊರಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ೩-೩೦ಕ್ಕೆ ಪ್ರಧಾನಾಲಯದಲ್ಲಿ ಪ್ರಭು ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದ ಸಮಯದಲ್ಲಿನ ನಡೆದ ಘಟನಾವಳಿಯನ್ನು ಬೈಬಲ್ ವಾಚನದ ಮೂಲಕ ವಿವರಿಸಿ ಧ್ಯಾನಿಸಲಾಯಿತು.
ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಚಿಕ್ಕಮಗಳೂರು, ಹಾಸನದ ಧರ್ಮ ಕ್ಷೇತ್ರದ ಬಿಷಪ್ರಾದ ಪೂಜ್ಯ ಡಾ.ಟಿ.ಅಂತೋಣಿಸ್ವಾಮಿಯವರು, ಪ್ರಭು ಯೇಸು ಕ್ರಿಸ್ತರ ಮೌಲ್ಯಗಳಾದ ಪ್ರೀತಿ, ಶಾಂತಿ, ದಯೆ, ಕರುಣೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಯದ ಹಾದಿಯಲ್ಲಿ ಹೊಸ ಜೀವನದೊಂದಿಗೆ ಆರಂಭಿಸುವಂತೆ ಆಶೀರ್ವಚನ ನೀಡಿದರು.
ಈ ಭಕ್ತಿ ಕಾರ್ಯದಲ್ಲಿ ಪ್ರಧಾನ ದೇವಾಲಯದ ಪ್ರಧಾನ ಗುರುಗಳಾದ ಶಾಂತರಾಜ್ ಆರ್, ಫಾದರ್ ಚಾರ್ಲ್ಸ್ ಪೀರೆರ, ಫಾದರ್ ರಾಯಪ್ಪ, ಫಾದರ್ ಸಂಜಯ್ ಡಿಸೋಜಾ, ಫಾದರ್ ಫೆಡ್ರಿಕ್ ಪಾಯಸ್ ಮತ್ತಿತರರು ಭಾಗವಹಿಸಿದ್ದರು.
Mass Good Friday celebration by Christian devotees
Leave a comment