ಚಿಕ್ಕಮಗಳೂರು: ರೈತರ ಆಸ್ತಿಯನ್ನು ಹರಾಜುಹಾಕುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಯುಗಾದಿ ಕಳೆದ ಬಳಿಕ ಕಣತಿ ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ,ಕಾಫಿ ಸೇರಿದಂತೆ ಪ್ಲಾಂಟೇಷನ್ ಬೆಳೆಗಾರರ ಸಾಲ ವಸೂಲಾತಿಗಾಗಿ ಬ್ಯಾಂಕುಗಳು ಅನುಸರಿಸುತ್ತಿರುವ ಸರ್ಫೇಸಿ ಕಾಯ್ದೆಯಿಂದ ಬೆಳೆಗಾರರು ಕಂಗಲಾಗಿದ್ದಾರೆ. ಈ ಕಾಯ್ದೆಯನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಆದರೂ ಈ ಸರ್ಫೇಸಿ ಕಾಯ್ದೆಯನ್ನು ಹಿಂಪಡೆಯಲು ಮುಂದಾಗುತ್ತಿಲ್ಲವೆಂದು ಹೇಳಿದರು.
ಇಬ್ಬರು ಬೆಳೆಗಾರರು ಕಡಬಗೆರೆ ಮತ್ತು ಕಣತಿ ಬ್ಯಾಂಕ್ ಶಾಖೆಯಲ್ಲಿ ಸಾಲ ಪಡೆದು ಮರುಪಾವತಿಸದ ಕಾರಣ ಆಸ್ತಿಯನ್ನು ಹರಾಜುಹಾಕಲು ಕರಪತ್ರಗಳನ್ನು ಹಂಚುವ ಮೂಲಕ ಡಂಗೂರ ಸಾರಲಾಗುತ್ತಿದೆ. ಈ ರೀತಿಯಲ್ಲಿ ಡಂಗೂರು ಸಾರುವ ಮೂಲಕ ರೈತರ ಮಾನವನ್ನು ಹರಾಜು ಹಾಕುತ್ತಿರುವುದು ಖಂಡನೀಯವೆಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರೊಂದಿಗೆ ಮಾತುಕತೆ ನಡೆಸಿ ಸರ್ಫೇಸಿ ಕಾಯ್ದೆಯಡಿ ಕಾಫಿತೋಟಗಳನ್ನು ಹರಾಜುಹಾಕುವುದನ್ನು ತಡೆಯುವಂತೆ ತಿಳಿಸಿದ್ದರು. ಈ ಕುರಿತು ಬ್ಯಾಂಕ್ಗಳಿಗೆ ನಿರ್ದೇಶನ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ ಬ್ಯಾಂಕುಗಳಿಂದ ಹರಾಜು ಪ್ರಕ್ರಿಯೆ ಮುಂದುವರೆದಿದೆ ಎಂದು ತಿಳಿಸಿದರು.
ಈ ಹಿಂದೆ ಗೌಪ್ಯವಾಗಿ ಹರಾಜುಹಾಕುತ್ತಿದ್ದ ಬ್ಯಾಂಕುಗಳು ಈಗ ಬಹಿರಂಗವಾಗಿ ಡಂಗೂರು ಹಾಕುವ ಮೂಲಕ ಹರಾಜಿಗೆ ಮುಂದಾಗಿದ್ದು, ರೈತರ ಮಾನ ಹರಾಜುಹಾಕಲು ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದೆ. ಇದನ್ನು ವಿರೋಧಿಸಿ, ಹರಾಜು ತಡೆಗಟ್ಟುವ ನಿಟ್ಟಿನಲ್ಲಿ ರೈತರ ಆಸ್ತಿ ಹರಾಜಿಗೆ ಮುಂದಾಗಿರುವ ಬ್ಯಾಂಕುಗಳ ಎದುರು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಭೂ ಮಾಫಿಯಾ ರಿಯಲ್ ಎಸ್ಟೇಟ್ ಏಜೆಂಟರು ಹಾಗೂ ಬ್ಯಾಂಕ್ ಸಿಬ್ಬಂದಿ ಸರ್ಫೇಸಿಕಾಯ್ದೆಯನ್ನು ಬಳಸಿಕೊಂಡು ರೈತರ ಆಸ್ತಿ ಹರಾಜಿಗೆ ಮುಂದಾಗಿದ್ದು, ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ರೈತ ಸಂಘದ ಜಿಲ್ಲಾ ವಕ್ತಾರ ಜೆ.ಎಸ್.ಶಿವಣ್ಣ, ಮತ್ತಾವರ ಮಂಜುನಾಥ ಇದ್ದರು.
Protest in front of the bank soon
Leave a comment