ಕಡೂರು: ಲಿಂಗ ಸಮಾನತೆಯನ್ನು ಸಾರುವ ಅಪರೂಪದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನಲ್ಲಿ ನಡೆದಿದ್ದು, ಹೆಣ್ಣುಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಬೀರೂರಿನ ಭಾವಸಾರ ಸಮಾಜದ ವಿಶ್ವನಾಥ್ ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ಹಿರಿಯ ಮಗಳು ಐಶ್ವರ್ಯ ಅವರೇ ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ನಿರ್ಧರಿಸಿದರು.
ಸಂಪ್ರದಾಯದಂತೆ ಹೆಗಲ ಮೇಲೆ ಮಣ್ಣಿನ ಕುಡಿಕೆ ಹೊತ್ತು ಮೃತದೇಹದ ಸುತ್ತ ಪ್ರದಕ್ಷಿಣೆ ಹಾಕಿ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಈ ಯುವತಿಯರು ಗಮನ ಸೆಳೆದಿದ್ದಾರೆ. ಈ ಮಹತ್ವದ ಕಾರ್ಯದಲ್ಲಿ ಐಶ್ವರ್ಯ ಅವರಿಗೆ ಅವರ ತಂಗಿ ಮತ್ತು ಭಾವ ಕೂಡ ಸಾಥ್ ನೀಡಿದ್ದಾರೆ.
ಸಾಮಾನ್ಯವಾಗಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಗಂಡುಮಕ್ಕಳೇ ಮಾಡಬೇಕು ಎಂಬ ಸಂಪ್ರದಾಯ ರೂಢಿಯಲ್ಲಿದೆ. ಆದರೆ ಕುಟುಂಬದ ಹಿರಿಯರು ಈ ಹೆಣ್ಣುಮಕ್ಕಳ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ಒಪ್ಪಿಗೆ ನೀಡಿದ್ದು ವಿಶೇಷವಾಗಿತ್ತು.
ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆದ ಈ ಅಂತ್ಯಕ್ರಿಯೆಯು ಲಿಂಗ ತಾರತಮ್ಯವನ್ನು ಮೆಟ್ಟಿ ನಿಂತಿದ್ದು, ಯುವತಿಯ ಈ ಧೈರ್ಯದ ನಿರ್ಧಾರಕ್ಕೆ ಸಮಾಜದ ಗಣ್ಯರು ಹಾಗೂ ಸ್ನೇಹಿತರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Daughters cremate father
Leave a comment