ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ಕುಶಲಕರ್ಮಿಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿ ಉಂಟುಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಆಜಾದ್ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಧಾನಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಸಾಂಪ್ರದಾಯಿಕ ಕುಲಕಸುಬುಗಳನ್ನು ಕೇವಲ ಜೀವನೋಪಾಯಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಆಧುನಿಕ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ರೂಪಿಸುವುದು ಈ ಯೋಜನೆಯ ಆಶಯವಾಗಿದೆ. ಉದಾಹರಣೆಗೆ, ಕುಂಬಾರರು ತಯಾರಿಸುವ ಮಣ್ಣಿನ ಪಾತ್ರೆಗಳನ್ನು ಸುಧಾರಿತ ತಂತ್ರಜ್ಞಾನದ ಮೂಲಕ ಆಕರ್ಷಕವಾಗಿ ವಿನ್ಯಾಸಗೊಳಿಸಿ ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆಸಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಕಲೆಗೆ ಜಾಗತಿಕ ಮನ್ನಣೆ ಸಿಗಲಿದೆ? ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ೨೧ ಕೋಟಿ ಸಾಲ ವಿತರಣೆ
ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಈವರೆಗೆ ಅಂದಾಜು ೭,೫೦೦ ಕುಶಲಕರ್ಮಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಈ ಪೈಕಿ ೪,೦೦೦ ಜನರಿಗೆ ತರಬೇತಿ ನೀಡಲಾಗಿದ್ದು, ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಒಟ್ಟು ೨೧ ಕೋಟಿ ಸಾಲ ಸೌಲಭ್ಯವನ್ನು ವಿತರಿಸಲಾಗಿದೆ. ಶೇ.೫ರಷ್ಟು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ರೂ. ೧ ಲಕ್ಷದಿಂದ ರೂ.೩ ಲಕ್ಷದವರೆಗೆ ಸಾಲ ನೀಡಲಾಗುತ್ತಿದ್ದು, ಇದು ಕುಶಲಕರ್ಮಿಗಳಿಗೆ ದೊಡ್ಡ ಆಸರೆಯಾಗಿದೆ ಎಂದರು.
ನೋಂದಾಯಿತ ಕುಶಲಕರ್ಮಿಗಳಿಗೆ ಒಂದು ವಾರದ ವೃತ್ತಿ ಪರ ತರಬೇತಿ ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಶಿಷ್ಯವೇತನವನ್ನೂ ಒದಗಿಸಲಾಗುತ್ತಿದೆ. ತರಬೇತಿಯ ಯಶಸ್ವಿ ಪೂರ್ಣಗೊಳಿಸುವಿಕೆಯ ನಂತರ, ಸ್ವಂತ ಉದ್ದಿಮೆ ಆರಂಭಿಸಲು ಅನುವಾಗುವಂತೆ ೧೫,೦೦೦ ರೂ. ಮೌಲ್ಯದ ಸುಧಾರಿತ ಪರಿಕರಗಳ ಕಿಟ್ ಅನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು.
ಅನಿಲ ಅಭಾವ: ಶೀಘ್ರವೇ ಪರಿಹಾರ
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಭಾವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಆಮದಿನಲ್ಲಿ ಅಲ್ಪಮಟ್ಟಿನ ವ್ಯತ್ಯಯವಾಗಿದೆ. ಈ ಕುರಿತು ವಿದೇಶಾಂಗ ಸಚಿವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಪ್ರಕಾರ, ಗೃಹಬಳಕೆಯ ಅನಿಲ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ವಾಣಿಜ್ಯ ಬಳಕೆಯ ಅನಿಲ ಸಮಸ್ಯೆಯೂ ಇನ್ನೆರಡು ದಿನಗಳಲ್ಲಿ ಸುಗಮಗೊಳ್ಳಲಿದೆ ಎಂದು ಭರವಸೆ ನೀಡಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಒಟ್ಟು ೫೦ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಕುಶಲಕರ್ಮಿಗಳು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಿದ್ದಾರೆ.
ಕೇಂದ್ರ ಪರಿಸರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟೀರಿಂಗ್ ಸಮಿತಿಯ ಸದಸ್ಯರಾದ ಹೆಚ್.ಸಿ.ಕಲ್ಮರುಡಪ್ಪ, ಭಾಸ್ಕರ್, ಸಂತೋಷ್ ಕೋಟ್ಯಾನ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮತ್ತಿತರರು ಇದ್ದರು.
Pradhan Mantri Vishwakarma Yojana brings new vitality to the lives of artisans
Leave a comment